ರಾಜ್ಯ

ಕೊಲ್ಲೂರಿನಲ್ಲಿ ಜನವರಿ 6 ರಿಂದ 8 ರವರೆಗೆ ಪಕ್ಷಿ ಉತ್ಸವ: ‘ಮಲಬಾರ್ ಟ್ರೋಗನ್’ ವಿಷಯ

Sumana Upadhyaya

ಬೆಂಗಳೂರು: ಬಹುಬೇಡಿಕೆಯ ಪಕ್ಷಿ ಉತ್ಸವ ಮತ್ತೆ ಬಂದಿದೆ. ಈ ಬಾರಿ ಕೊಲ್ಲೂರಿನ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದಲ್ಲಿ ಜನವರಿ 6ರಿಂದ 8ರವರೆಗೆ ನಡೆಯಲಿದೆ. ಉತ್ಸವದ 9 ನೇ ಆವೃತ್ತಿಯ ವಿಷಯ 'ಮಲಬಾರ್ ಟ್ರೋಗನ್' ಆಗಿದೆ. ಇದನ್ನು ಬೆಂಕಿ ಕಾಗೆ ಎಂದೂ ಕರೆಯುತ್ತಾರೆ, ಅದರ ಲೋಹೀಯ ಕೆಂಪು ಮತ್ತು ಕಡುಗೆಂಪು ಗರಿಗಳು ಮತ್ತು ಕಾಗೆಯಂತಹ ನೋಟದಿಂದಾಗಿ ಈ ಹೆಸರು ಬಂದಿದೆ. ಉತ್ಸವವನ್ನು ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿಯು ಆಯೋಜಿಸುತ್ತಿದೆ. 

ಮಂಡಳಿಯ ಅಧ್ಯಕ್ಷ ಮದನ್ ಗೋಪಾಲ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಪಕ್ಷಿ ಜಾತಿಗಳು ಮತ್ತು ಅವುಗಳ ಆವಾಸಸ್ಥಾನದ ಬಗ್ಗೆ ಜಾಗೃತಿ ಮೂಡಿಸಲು ಪಕ್ಷಿ ಮತ್ತು ಸ್ಥಳವನ್ನು ಆಯ್ಕೆ ಮಾಡಲಾಗಿದೆ. ಪಶ್ಚಿಮ ಘಟ್ಟಗಳಿಗೆ ಹತ್ತಿರವಾಗಿದ್ದು, ಪ್ರದೇಶಗಳು ಪಕ್ಷಿಗಳಿಗೆ ಆವಾಸಸ್ಥಾನವಾಗಿದೆ. ಪ್ರತಿ ವರ್ಷವೂ ವಿಭಿನ್ನ ವಿಷಯಗಳು ಮತ್ತು ಪಕ್ಷಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಉಡುಪಿ ಮತ್ತು ಶಿವಮೊಗ್ಗದ ನಡುವೆ ಆಯ್ಕೆ ಮಾಡಲಾದ ಪ್ರದೇಶವು ಪಕ್ಷಿಶಾಸ್ತ್ರಜ್ಞರಿಗೆ ಅಧ್ಯಯನ ಮಾಡಲು ಅನೇಕ ಪಕ್ಷಿಗಳೊಂದಿಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ. ಸ್ಥಳದಲ್ಲಿ ಪಕ್ಷಿಗಳಿಗಾಗಿ ಎಂಟು ಜಾಡುಗಳನ್ನು ಗುರುತಿಸಲಾಗಿದೆ. ಕರ್ನಾಟಕವು 500 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ ಎಂದು ಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದರು. 

ಋತುವಿನ ಕಾರಣದಿಂದ ಆಕರ್ಷಕ ರೆಕ್ಕೆಯ ಜೀವಿಗಳನ್ನು ಗುರುತಿಸಲು ಜನವರಿ ಸೂಕ್ತ ಸಮಯವಾಗಿದೆ. ಡಿಸೆಂಬರ್-ಫೆಬ್ರವರಿ ಅವಧಿಯಲ್ಲಿ ಅನೇಕ ವಲಸೆ ಮತ್ತು ಸ್ಥಳೀಯ ಪಕ್ಷಿಗಳನ್ನು ನೋಡಬಹುದು. ಹುಲಿ ಕೇಂದ್ರಿತ ಪ್ರವಾಸೋದ್ಯಮವನ್ನು ವೈವಿಧ್ಯಗೊಳಿಸುವತ್ತ ಇದು ಒಂದು ಹೆಜ್ಜೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೆ ಮಂಡ್ಯದ ರಂಗನತಿಟ್ಟು ಪಕ್ಷಿಧಾಮ, ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಪ್ರದೇಶ, ಬಳ್ಳಾರಿಯ ದರೋಜಿ ಕರಡಿಧಾಮ, ಮಂಗಳೂರಿನ ಪಿಲಿಕುಳ ನಿಸರ್ಗಧಾಮ, ಬೀದರ್‌ನ ಹಳ್ಳದಕೇರಿ ಟ್ರೀ ಪಾರ್ಕ್, ಚಿಕ್ಕಬಳ್ಳಾಪುರದ ನಂದಿ ಬೆಟ್ಟ, ಚಾಮರಾಜನಗರ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ, ಮಡಿಕೇರಿಯಲ್ಲಿ ಪಕ್ಷಿ ಸಂತೆ ನಡೆಸಲಾಗಿದೆ. 

SCROLL FOR NEXT