ಬೆಳಗಾವಿ: ಎನ್ಸಿಪಿ ಮುಖಂಡ ಶರದ್ ಪವಾರ್ ಅವರ ಸಹೋದರ ಸಂಬಂಧಿ, ಮಹಾರಾಷ್ಟ್ರದ ಶಾಸಕ ರೋಹಿತ್ ಪವಾರ್ ಮಂಗಳವಾರ ಬೆಳಗಾವಿಯ ಎಂಇಎಸ್ ಮುಖಂಡರ ಜತೆ ರಹಸ್ಯ ಸಭೆ ನಡೆಸಿದರು.
‘ಗಡಿ ವಿಚಾರವಾಗಿ ನಡೆದ ಬೆಳವಣಿಗೆಗಳ ಮಾಹಿತಿ ಪಡೆಯಲು, ಮಹಾ ವಿಕಾಸ ಅಘಾಡಿ ನಾಯಕರ ಸೂಚನೆ ಮೇರೆಗೆ ರೋಹಿತ್ ಅವರು ಸೋಮವಾರ ಸಂಜೆ ಬೆಳೆಗಾವಿಗೆ ಬಂದರು. ಇಲ್ಲಿನ ಮರಾಠಿಗರ ಸ್ಥಿತಿಗತಿಗಳ ಮಾಹಿತಿ ಪಡೆದರು’ ಎಂದು ಎಂಇಎಸ್ನ ಮುಖಂಡರು ತಿಳಿಸಿದ್ದಾರೆ.
ಮಂಗಳವಾರ ಸಮೀಪದ ಹಿಂಡಲಗಾ ಗ್ರಾಮದಲ್ಲಿರುವ, ಗಡಿ ಹೋರಾಟದಲ್ಲಿ ಮೃತಪಟ್ಟ 9 ಜನರ ಹುತಾತ್ಮ ಸ್ಮಾರಕ, ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಯಳ್ಳೂರು ಗ್ರಾಮದಲ್ಲಿರುವ ‘ಮಹಾರಾಷ್ಟ್ರ ಪ್ರೌಢಶಾಲೆ’ಗೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು ಬೆಳಗಾವಿಯೊಂದಿಗೆ ಬಹಳ ಹಿಂದಿನಿಂದಲೂ ಸಂಪರ್ಕ ಹೊಂದಿದ್ದೇನೆ ನಾನು ಮುಖ್ಯರಸ್ತೆ ಬಳಸಿ ಬೆಳಗಾವಿಗೆ ಬಂದಿಲ್ಲ ಎಂದರು.
ಇದನ್ನೂ ಓದಿ: ಡಿ ಸಮಸ್ಯೆ ಈಗಾಗಲೆ ಇತ್ಯರ್ಥವಾಗಿದೆ ಎಂಬುದನ್ನು ಮಹಾರಾಷ್ಟ್ರಕ್ಕೆ ತಿಳಿಸಬೇಕು: ಸುಪ್ರೀಂ ಕೋರ್ಟ್ ಹಿರಿಯ ವಕೀಲ
ಬೆಳಗಾವಿಯಲ್ಲಿನ ಮರಾಠಿ ಭಾಷಿಕರ ಸಮಸ್ಯೆಗಳನ್ನು ಪರಿಹರಿಸಲು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಚರ್ಚೆಯನ್ನು ಖಂಡಿತ ಆರಂಭಿಸುತ್ತೇನೆ,’’ ಎಂದು ಹೇಳಿದರು. ‘ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರ ಬೆಳಗಾವಿ ಪ್ರವೇಶಕ್ಕೆ ನಿಷೇಧ ಹೇರಿದ ಕಾರಣ, ಎನ್ಸಿಪಿ ನಾಯಕರು ರೋಹಿತ್ ಪವಾರ್ ಅವರನ್ನು ಕಳುಹಿಸಿದ್ದಾರೆ. ಮಾಧ್ಯಮಗಳ ಮುಂದೆ ಹುಲಿಯಂತೆ ಗರ್ಜಿಸುವ ಮಹಾರಾಷ್ಟ್ರದ ನಾಯಕರು, ಈಗ ಕಳ್ಳ ನರಿಯಂತೆ ಬಂದು ಹೋಗುತ್ತಿದ್ದಾರೆ’ ಅವರೊಬ್ಬ ಹೇಡಿ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಕಿಡಿ ಕಾರಿದ್ದಾರೆ.