ರಾಜ್ಯ

ಜನಸಾಮಾನ್ಯರ ಆರ್ಥಿಕತೆಗೆ ತೊಂದರೆಯಾಗದಂತೆ  ಮುಂಜಾಗ್ರತಾ ಕ್ರಮಗಳ ಜಾರಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Srinivas Rao BV

ಬೆಳಗಾವಿ: ಕೋವಿಡ್ ನಿಂದಾಗಿ ಜನರ ಆರ್ಥಿಕತೆಗೆ ಯಾವುದೇ  ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಹಂತಹಂತವಾಗಿ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬೆಳಗಾವಿ ಸುವರ್ಣಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಬಗ್ಗೆ ಪ್ರತಿಕ್ರಿಯೆ ನೀಡಿ, ಸಚಿವಸಂಪುಟದಲ್ಲಿ ಈ ಬರ್ಗೆ ಚರ್ಚಿಸಲಾಗಿದ್ದು, ಜನರಲ್ಲಿ  ಜಾಗೃತಿ ಮೂಡಿಸುವುದು, ಬೂಸ್ಟರ್ ಡೋಸ್ ಹೆಚ್ಚಿಸುವುದು,ಐಎಲ್ಐ ಮತ್ತು ಸಾರಿ ಪರೀಕ್ಷೆಗಳನ್ನು ಹೆಚ್ಚಿಸುವುದು, ಮಾಸ್ಕ್ ಗಳ ಧಾರಣೆ, ಒಳಾಂಗಣಗಳಲ್ಲಿ ಮಾಸ್ಕ್ ಧಾರಣೆ ಕಡ್ಡಾಯ ಗಳ ಬಗ್ಗೆ ತಜ್ಞರ ಸಮಿತಿಯೊಂದಿಗೆ ಸಭೆ ನಡೆಸಿ, ಹಂತಹಂತವಾಗಿ  ನಿಯಮಗಳನ್ನು ಜಾರಿ ತರಲಾಗುವುದು ಎಂದರು.

ಹೊಸ ವರ್ಷ ಆಚರಣೆ:
ಹೊಸ ವರ್ಷಕ್ಕೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸುವ ಬಗ್ಗೆ ಉತ್ತರಿಸಿ, ಪ್ರತಿ ಬಾರಿಯಂತೆ ಈ ವರ್ಷವೂ ನಿಯಮಗಳಿದ್ದು, ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ  ಕೆಲವು ಮಾರ್ಗಸೂಚಿಗಳನ್ನು ಸೇರಿಸಲಾಗುವುದು. ಜನಸಾಮಾನ್ಯರ ದೈನಂದಿನ ಚಟುವಟಿಕೆ, ಆರ್ಥಿಕತೆಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು  ಹಂತಹಂತವಾಗಿ ಜಾರಿ ಮಾಡಲಾಗುವುದು ಎಂದರು.

ಬೆಳಗಾವಿ ಅಧಿವೇಶನ ಫಲಪ್ರದ ಹಾಗೂ ಅರ್ಥಪೂರ್ಣವಾಗಬೇಕು:

ಬೆಳಗಾವಿಯಲ್ಲಿನ ಅಧಿವೇಶನ ಫಲಪ್ರದ ಹಾಗೂ ಅರ್ಥಪೂರ್ಣವಾಗಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ.  ಉತ್ತರ ಕರ್ನಾಟಕದ ಸಮಸ್ಯೆಗಳು ಮತ್ತುಯೋಜನೆಗಳ ಬಗ್ಗೆ ಸುದೀರ್ಘ ಚರ್ಚೆಯಾಗಬೇಕು. ವಿರೋಧಪಕ್ಷಗಳು ಹತ್ತು ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಿವೆ. ಯಾವ ವಿಚಾರವೇ ಆಗಲಿ ಚರ್ಚಿಸಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದರು.

ಇಂದು ನವದೆಹಲಿಗೆ ಪ್ರಯಾಣ- ಪಕ್ಷದ ವರಿಷ್ಠರೊಂದಿಗೆ ಚರ್ಚೆ:

ಇಂದು ನವದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದೇನೆ. ಕಳೆದ ಬಾರಿ ಕೆಲವೊಂದು ವಿಷಯಗಳ ಚರ್ಚೆ ಅಪೂರ್ಣವಾಗಿದ್ದರಿಂದ ಪುನ: ಕರೆದಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರು ಸಭೆಯನ್ನು ಕರೆದಿದ್ದಾರೆ. ಪಕ್ಷದ ಮುಖಂಡರು, ಕೇಂದ್ರ ಗೃಹ ಸಚಿವರು ಸಭೆಯಲ್ಲಿ ಉಪಸ್ಥಿತರಿದ್ದು, ಚುನಾವಣಾ ತಯಾರಿ, ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಎಲ್ಲ ವಿಚಾರಗಳನ್ನು ಚರ್ಚಿಸಲಾಗುವುದು. ಈ ಸಭೆಯಲ್ಲಿ ಭಾಗವಹಿಸಿ ನಾಳಿನ ಅಧಿವೇಶನಕ್ಕೆ ವಾಪಸ್ಸು ಬರಲಿದ್ದೇನೆ. ಸಚಿವ ಸಂಪುಟ ವಿಸ್ತರಣೆ, ಖಾಲಿ ಸಚಿವ ಸ್ಥಾನ ಭರ್ತಿ ವಿಚಾರಗಳು ಸಭೆಯಲ್ಲಿ ಚರ್ಚೆಯಾಗಲಿವೆ ಎಂದರು.

ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ:

ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆಯೂ ಸಂಬಂಧಪಟ್ಟ ಕೇಂದ್ರ ಸಚಿವರನ್ನು ಭೇಟಿ ಮಾಡಲಾಗುವುದು. ಕೇಂದ್ರ ನೀರಾವರಿ ಸಚಿವರ ಭೇಟಿಗೆ ಸಮಯ ಕೇಳಲಾಗಿದ್ದು, ನೀರಾವರಿಯ ನಾಲ್ಕೈದು ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು

SCROLL FOR NEXT