ಬೆಂಗಳೂರು: ಪೀಣ್ಯದಲ್ಲಿರುವ ಬಸವೇಶ್ವರ ಬಸ್ ನಿಲ್ದಾಣವನ್ನು 'ಎಲೆಕ್ಟ್ರಿಕ್ ಬಸ್ಗಳ ಡಿಪೋ' ಆಗಿ ಪರಿವರ್ತಿಸಲು' ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
2014ರಲ್ಲಿ ಸುಮಾರು ರೂ.40 ಕೋಟಿ ವೆಚ್ಚದಲ್ಲಿ ಆರು ಎಕರೆ ಜಾಗದಲ್ಲಿ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿತ್ತು. ಈ ಬಸ್ ನಿಲ್ದಾಣದ ಮೂಲಕ ಉತ್ತರ ಕರ್ನಾಟಕದ ಕಡೆಗೆ ಸಂಚರಿಸುವ ಎಲ್ಲ ಬಸ್ಗಳನ್ನು ಪೀಣ್ಯ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸುವ ಮೂಲಕ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಂಚಾರ ಸುಗಮಗೊಳಿಸಲು ಉದ್ದೇಶಿಸಲಾಗಿತ್ತು.
ಆದರೆ, ಜನರಿಂದ ಉತ್ತಮ ಪ್ರತಿಕ್ರಿಯೆಗಳು ಸಿಗದ ಕಾರಣ, ಕೆಎಸ್ಆರ್ಟಿಸಿ ಈ ನಿಲ್ದಾಣದಲ್ಲಿ ಬಸ್ ಗಳ ಸಂಚಾರವನ್ನು ಸ್ಥಗಿತಗೊಳಿಸಿತ್ತು. ನಂತರ ನಿಲ್ದಾಣಕ್ಕೆ ಜನರನ್ನು ಆಕರ್ಷಿಸಲು ಮೆಟ್ರೋ ನಿಲ್ದಾಣವನ್ನು ನಿರ್ಮಿಸುವ ಪ್ರಯತ್ನವನ್ನೂ ಮಾಡಿತು. ಆದರೆ, ಆರ್ಥಿಕವಾಗಿ ಲಾಭದಾಯಕವಲ್ಲದ ಕಾರಣ ಈ ಚಿಂತನೆಯನ್ನು ಕೈಬಿಟ್ಟಿತ್ತು.
ಕೆಎಸ್ಆರ್ಟಿಸಿ ಅಧಿಕಾರಿಯೊಬ್ಬರು ಮಾತನಾಡಿ, ಎಲ್ಲಾ ಅಂತರ್ ರಾಜ್ಯ ಬಸ್ಗಳಿಗೆ ಮೆಜೆಸ್ಟಿಕ್ ಮುಖ್ಯ ಬಸ್ ನಿಲ್ದಾಣವಾಗಿದೆ. ಮೆಜೆಸ್ಟಿಕ್ನಲ್ಲಿ ಸಂಚಾರ ಅಸ್ತವ್ಯಸ್ತವಾಗುತ್ತಿದ್ದಂತೆ, ಕೆಎಸ್ಆರ್ಟಿಸಿ ದಕ್ಷಿಣ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದ ಬಸ್ಗಳ ಕಾರ್ಯಾಚರಣೆಯನ್ನು 2005 ರಲ್ಲಿ ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಿತು. ನಂತರ ಶಾಂತಿನಗರ ಬಸ್ ನಿಲ್ದಾಣಕ್ಕೂ ಸ್ಥಳಾಂತರಿಸಿತ್ತು. ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಎದುರಾಗಿದ್ದ ಒತ್ತಡವನ್ನು ನಿವಾರಿಸಲು ಈ ಎರಡು ನಿಲ್ದಾಣಗಳು ನಿರ್ಣಾಯಕ ಪಾತ್ರ ವಹಿಸಿದವು. ಹೀಗಾಗಿ 2014ರಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ತೆರಳುತ್ತಿದ್ದ ಬಸ್ಗಳನ್ನು ಮೆಜೆಸ್ಟಿಕ್ನಿಂದ ಪೀಣ್ಯಕ್ಕೆ ಸ್ಥಳಾಂತರಿಸಲು ಇದೇ ರೀತಿಯ ಪ್ರಯತ್ನ ನಡೆಸಲಾಗಿತ್ತು. ಆದರೆ, ವಿಫಲಗೊಂಡಿತು ಎಂದು ಹೇಳಿದ್ದಾರೆ.
ಪೀಣ್ಯದಲ್ಲಿರುವ ಬಸವೇಶ್ವರ ಬಸ್ ನಿಲ್ದಾಣವು ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ ಮತ್ತು ಶಾಂತಿನಗರ ಬಸ್ ನಿಲ್ದಾಣದಂತೆ ಉದ್ದೇಶಿತ ಉದ್ದೇಶವನ್ನು ಸಾಧಿಸಿಲ್ಲ ಎಂದು ಕೆಎಸ್ಆರ್ಟಿಸಿ ಎಂಡಿ ಅನ್ಬು ಕುಮಾರ್ ಅವರು ಹೇಳಿದ್ದಾರೆ.
ಬಸ್ ನಿಲ್ದಾಣವನ್ನು ಬಳಸಿಕೊಳ್ಳಲು ಸಾಧ್ಯವಿರುವ ಎಲ್ಲ ಆಯ್ಕೆಗಳನ್ನೂ ನಾವು ಅನ್ವೇಷಿಸುತ್ತಿದ್ದೇವೆ. ಯಾವುದೇ ಕಾರ್ಯಾಚರಣೆಗಳಿಲ್ಲದೆ ಅದನ್ನು ನಿಷ್ಕ್ರಿಯವಾಗಿಡಲು ನಾವು ಬಯಸುವುದಿಲ್ಲ. ಎಲೆಕ್ಟ್ರಿಕ್ ಬಸ್ ಗಳನ್ನು ಅಳವಡಿಸಿಕೊಳ್ಳುವುದರಿಂದ ಬಸ್ ನಿಲ್ದಾಣವನ್ನು ನಾವು ಇದೀಗ ಇ-ಡಿಪೋ ಆಗಿ ಪರಿವರ್ತಿಸಲು ಚಿಂತನೆ ನಡೆಸಿದ್ದೇವೆಂದು ತಿಳಿಸಿದ್ದಾರೆ.
ಕೆಎಸ್ಆರ್ಟಿಸಿ 50 ಇ-ಬಸ್ಗಳನ್ನು ಸ್ವೀಕರಿಸುವ ನಿರೀಕ್ಷೆಯಿದೆ. ಈ ಬಸ್ ಗಳು ಅಂತರ್ ರಾಜ್ಯಗಳಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದಿದ್ದಾರೆ.