ಬಂಟ್ವಾಳ: ಧಾರಾಕಾರ ಮಳೆಗೆ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ನೇಲ್ಯಪಲ್ಕೆ ಪಕ್ಕದ ಮುಕ್ಕುಡ ಬಳಿ ಕಳೆದ ರಾತ್ರಿ ಭೂಕುಸಿತ ಉಂಟಾಗಿದ್ದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ
ಸತತ ಮಳೆಯಿಂದಾಗಿ ಮನೆಯೊಂದರ ಮೇಲೆ ಮಣ್ಣು ಕುಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟವರು ಕೇರಳ ಮೂಲದ ಕಾರ್ಮಿಕರಾಗಿದ್ದಾರೆ.
ಗುಡ್ಡ ಕುಸಿದು ಸ್ಥಳೀಯ ನಿವಾಸಿ ಹೆನ್ರಿ ಕಾರ್ಲೋ ಎಂಬುವವರ ಮನೆ ಮೇಲೆ ಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಒಟ್ಟು ಐದು ದಿನಗೂಲಿ ಕಾರ್ಮಿಕರು ಶೆಡ್ನಲ್ಲಿ ವಾಸಿಸುತ್ತಿದ್ದರು. ಒಬ್ಬನು ದೂರದಲ್ಲಿದ್ದುದರಿಂದ ಪಾರಾಗಿದ್ದಾನೆ. ರಾತ್ರಿ ಸುಮಾರು 8.45ರ ವೇಳೆಗೆ ಈ ಘಟನೆ ಸಂಭವಿಸಿದೆ.
ಕೂಡಲೇ ಜೆಸಿಬಿ ಅಗೆಯುವ ಯಂತ್ರ ಬಳಸಿ ಮಣ್ಣಿನ ರಾಶಿಯನ್ನು ತೆರವುಗೊಳಿಸಿ ಸಮಯಕ್ಕೆ ಸರಿಯಾಗಿ ಮೂವರನ್ನು ಅವಶೇಷಗಳಡಿಯಿಂದ ತೆಗೆಯಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಕರಾವಳಿ ಭಾಗದಲ್ಲಿ ಮುಂದುವರಿದ ಧಾರಾಕಾರ ಮಳೆ: ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್ ಘೋಷಣೆ, ಶಾಲಾ-ಕಾಲೇಜುಗಳಿಗೆ ರಜೆ
ಮೃತ ಕಾರ್ಮಿಕರನ್ನು ಬಿಜು ಪಾಲಕ್ಕಾಡ್, (45), ಬಾಬು ಕೊಟ್ಟಾಯಂ, (46) ಮತ್ತು ಸಂತೋಷ್ ಅಲಪುಝಾ, (46) ಎಂದು ಗುರುತಿಸಲಾಗಿದೆ. ಏತನ್ಮಧ್ಯೆ, ಜಾನಿ ಕಣ್ಣೂರು ಎಂಬಾತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ನಡೆದ ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯರು ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳೀಯರ ಸಹಾಯದಿಂದ ಕಾರ್ಯಾಚರಣೆ ನಡೆದಿದ್ದು, ಮಣ್ಣಿನಡಿ ಸಿಲುಕಿಕೊಂಡಿದ್ದಕಾರ್ಮಿಕರನ್ನು ಅವಶೇಷಗಳಿಂದ ಹೊರತೆಗೆದಿದ್ದಾರೆ.