ರಾಜ್ಯ

ಭೀಕರ ವಿಡಿಯೋ: ದೇವಸ್ಥಾನದ ರಸ್ತೆ ಮೇಲೆ ಮಲಗಿದ್ದವರ ಮೇಲೆ ಹರಿದ ಗೂಡ್ಸ್ ಗಾಡಿ; ಓರ್ವ ಸ್ಥಳದಲ್ಲೇ ಸಾವು, ಹಲವರಿಗೆ ಗಾಯ

Srinivasamurthy VN

ಕೊಪ್ಪಳ: ದೇವಸ್ಥಾನದ ರಸ್ತೆ ಮೇಲೆ ಮಲಗಿದ್ದವರ ಮೇಲೆ ಗೂಡ್ಸ್ ಗಾಡಿಯೊಂದು ಹರಿದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರಿಗೆ ಗಾಯವಾಗಿವೆ.

ಕೊಪ್ಪಳದ ಧಾರ್ಮಿಕ ಕ್ಷೇತ್ರ ಹುಲಗಿಯ ನಂದಿ ಸರ್ಕಲ್‌ ರಸ್ತೆಯ ಮುದ್ದಮ್ಮ ದೇವಸ್ಥಾನದ ಹಿಂಭಾಗದ ಸಂಕೀರ್ಣದಲ್ಲಿರುವ ಬಳೆ ಅಂಗಡಿಯ ಮುಂದೆ ಮಲಗಿದ್ದವರ ಮೇಲೆ ವ್ಯಕ್ತಿಯೊಬ್ಬ ತನ್ನ ಸರಕು ಸಾಗಾಣಿಕಾ ಟೆಂಪೊ ಹರಿಸಿದ್ದು, ಈ ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ತಿಪ್ಪಣ್ಣ ದುರಗಪ್ಪ (75) ಮೃತಪಟ್ಟಿದ್ದು, ಕುಕನೂರಿನ ಹನುಮವ್ವ ಉಪ್ಪಾರ (57), ಸಿರಗುಪ್ಪ ತಾಲ್ಲೂಕಿನ ರುದ್ರಪಾಲ ಗ್ರಾಮದ ಮಲ್ಲಮ್ಮ ಬಿಳೆಕಲ್ಲಪ್ಪ (32), ಕಾರಟಗಿಯ ತಾಲ್ಲೂಕಿನ ನಂದಿಹಳ್ಳಿ ತುಕರಾಮ ಮಾಕಪ್ಪ (65) ಗಂಭೀರವಾಗಿ ಗಾಯಗೊಂಡಿದ್ದಾರೆ.

‘ಘಟನೆ ಭಾನುವಾರ ರಾತ್ರಿ ನಡೆದಿದ್ದು, ಬಳ್ಳಾರಿ ತಾಲ್ಲೂಕಿನ ಯರಂಗಳಿಯ ಚಾಲಕ ಶ್ರೀನಿವಾಸ ಮದ್ಯ ಸೇವಿಸಿ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದಾನೆ‘ ಎಂದು ರಸ್ತೆ ಬದಿ ಮಲಗಿದ್ದ ರುದ್ರಪಾಲ ಗ್ರಾಮದ ಎಂಬುವರು ಮುನಿರಾಬಾದ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಎಫ್‌ಐಆರ್‌ ದಾಖಲಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. 

ಈ ಅಪಘಾತದ ಭೀಕರ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಈ ವಿಡಿಯೊ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ.  
 

SCROLL FOR NEXT