ಬೆಂಗಳೂರು: ರಾಜಧಾನಿಯ ಜಯಮಹಲ್ ನಲ್ಲಿರುವ ತಮ್ಮ ನಿವಾಸದ ಬಳಿ ಕೆಲವು ಎಬಿವಿಪಿ ಕಾರ್ಯಕರ್ತರು ಬಂದು ಪ್ರತಿಭಟನೆ ಮಾಡಿರುವ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಮೊಗ್ಗ ಪ್ರವಾಸದಲ್ಲಿರುವ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಿಎಫ್ ಐ, ಎಸ್ಎಫ್ಐ, ಎಸ್ ಡಿಪಿಐಯಂತಹ ಮತೀಯ ಸಂಘಟನೆಗಳನ್ನು ನಿಷೇಧ ಮಾಡಬೇಕೆಂಬುದು ಅವರ ನಿಲುವಾಗಿದೆ. ಮತೀಯ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಾಗುವುದಿಲ್ಲ ಎಂದು ಪ್ರತಿಭಟನಾಕಾರರ ನಿಲುವಾಗಿದೆ. ನಮ್ಮ ಸರ್ಕಾರದ ಕಣ್ಣು ತೆರೆಯುವ ಕೆಲಸ ಮಾಡಿದ್ದಾರೆ ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ನುಗ್ಗಿದ ಘಟನೆಗೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ನಿವಾಸಕ್ಕೆ ನುಗ್ಗಲು ಎಬಿವಿಪಿ ಕಾರ್ಯಕರ್ತರ ಯತ್ನ; ಪೊಲೀಸರ ಲಾಠಿಪ್ರಹಾರ
ಘಟನೆಗೆ ಸಂಬಂಧಿಸಿ ಇಂದು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಇಂದು ಬೆಳಗ್ಗೆ 9.30ರ ಸುಮಾರಿಗೆ ಕೆಲವು ಎಬಿವಿಪಿ ಕಾರ್ಯಕರ್ತರು ಏಕಾಏಕಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮನೆ ಮುಂದೆ ಪ್ರತಿಭಟನೆ ಮಾಡಲು ಮುಂದಾದಾಗ ನಮ್ಮ ಪೊಲೀಸುರ ಅವರನ್ನು ಗೇಟ್ ಬಳಿ ನಿಲ್ಲಿಸಿದರು.
ಆದರೆ ಕಾರ್ಯಕರ್ತರು ಲೆಕ್ಕಿಸದೆ ಗೇಟನ್ನು ತೆರೆದು ಮನೆಯೊಳಗೆ ಪ್ರವೇಶಿಸಲು ಮುಂದಾದಾಗ ಪೊಲೀಸರು ಅನಿವಾರ್ಯವಾಗಿ ವಶಕ್ಕೆ ತೆಗೆದುಕೊಂಡು ಈಗಾಗಲೇ 40 ಮಂದಿಯನ್ನು ದಸ್ತಗಿರಿ ಮಾಡಿದ್ದೇವೆ ಎಂದರು.