ರಾಜ್ಯ

ನಮ್ಮ ಆತಿಥ್ಯ ವಿಭಾಗ ನಿರ್ವಹಿಸಿ: ಕೆಎಸ್ ಟಿಡಿಸಿಗೆ ರಾಜಭವನ ಆಫರ್!

Srinivas Rao BV

ಬೆಂಗಳೂರು: ಶೀಘ್ರವೇ ರಾಜಭವನ ನವೀಕರಣಗೊಳ್ಳಲಿದ್ದು, ಇದೇ ಮೊದಲ ಬಾರಿಗೆ ಅಲ್ಲಿನ ಆತಿಥ್ಯ ವಿಭಾಗವನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವಹಿಸಿಕೊಳ್ಳಲಿದೆ.
 
ಪ್ರವಾಸೋದ್ಯಮ ಇಲಾಖೆಯ ವಿಭಾಗವಾಗಿರುವ ಕೆಎಸ್ ಟಿಡಿಸಿ ಗೆ ಜೂನ್ 2022 ರಲ್ಲಿ ಪ್ರಸ್ತಾವನೆಯನ್ನು ಕಳಿಸಲಾಗಿತ್ತು ಆಗಿನಿಂದ ಅಧಿಕಾರಿಗಳು ರಾಜ್ಯಪಾಲರ ಮುಂದಿಡಬೇಕಾದ ಯೋಜನೆಗಳನ್ನು ಸಿದ್ಧಪಡಿಸುವುದರಲ್ಲಿ ನಿರತರಾಗಿದ್ದಾರೆ. 

"ಈ ವರೆಗೂ ರಾಜಭವನದ ಸಿಬ್ಬಂದಿಗಳಿಂದಲೇ ನಿರ್ವಹಣೆ ಮಾಡಲ್ಪಡುತ್ತಿದ್ದ ರಾಜಭವನದ ಆತಿಥ್ಯವನ್ನು ಕೆಎಸ್ ಟಿಡಿಸಿ ಗೆ ವಹಿಸಲಾಗುತ್ತಿದೆ. ರಾಜಭವನದ ಕಾರ್ಯದರ್ಶಿಗಳಿಂದ ನಮಗೆ ಮನವಿ ಬಂದಿತ್ತು, ರಾಜಭವನಕ್ಕೆ ಭೇಟಿ ನೀಡುವ ಅತಿಥಿಗಳಿಗೆ ಆತಿಥ್ಯವನ್ನು ಕುಮಾರ ಕೃಪಾ ಅತಿಥಿಗೃಹದ ಮಾದರಿಯಲ್ಲೇ ಅಥವಾ ಕೆಎಸ್ ಟಿಡಿಸಿಗೆ ಸೇರಿದ ಇನ್ನಿತರ ಸೇವೆಗಳಂತೆಯೇ ನಿರ್ವಹಿಸಬೇಕೆಂಬ ಸೂಚನೆ ಬಂದಿದೆ ಎಂದು ಕೆಎಸ್ ಟಿಡಿಸಿ ಎಂಡಿ ಜಗದೀಶ್ ಜಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದ್ದಾರೆ. 

ಕುಮಾರ ಕೃಪಾ ಅತಿಥಿ ಗೃಹ, ಮಡಿಕೇರಿಯಲ್ಲಿರುವ ಅತಿಥಿ ಗೃಹ ಸೇರಿದಂತೆ ಇತರ ಕೆಎಸ್ ಟಿಡಿಸಿ ನಿರ್ವಹಣೆಯಲ್ಲಿರುವ ಪ್ರದೇಶಗಳಿಗೆ ಹಲವು ರಾಜ್ಯಪಾಲರು, ರಾಜಕಾರಣಿಗಳು ಹಾಗೂ ಗಣ್ಯರು ಭೇಟಿ ನೀಡಿ, ಉತ್ತಮ ಸೇವೆ ಲಭ್ಯವಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ ಬಳಿಕ ರಾಜಭವನದಲ್ಲಿಯೂ ಅದನ್ನೇ ಬಳಸಿಕೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. 

ಇತ್ತೀಚೆಗಷ್ಟೇ ಗೋವಾ ರಾಜ್ಯಪಾಲರು ಹಾಗೂ ಉತ್ತರ ಪ್ರದೇಶದ ರಾಜ್ಯಪಾಲರು ಕುಮಾರ ಕೃಪ ಅತಿಥಿ ಗೃಹಕ್ಕೆ ಭೇಟಿ ನೀಡಿದ್ದರು ಎಂದು ಕೆಎಸ್ ಟಿ ಡಿಸಿ ಅಧಿಕಾರಿಗಳು ಹೇಳಿದ್ದಾರೆ. ರಾಜಭವನಕ್ಕೆ ಭೇಟಿ ನೀಡುವ ಅತಿಥಿಗಳಿಗೆ ಆಹಾರ, ಅಡುಗೆ, ಪಂಚತಾರಾ ಹೋಟೆಲ್ ಮಾದರಿಯ ಸೇವೆಗಳು ಹಾಗೂ ಆತಿಥ್ಯ, ಉದ್ಯಾನವನ ನಿರ್ವಹಣೆಯನ್ನು ಕೆಎಸ್ ಟಿಡಿಸಿ ವಹಿಸಿಕೊಳ್ಳುವ ನಿರೀಕ್ಷೆ ಇದೆ. 

ಸೇವೆಗಳು ಇನ್ನು 2 ತಿಂಗಳಲ್ಲಿ ಪ್ರಾರಂಭವಾಗುವ ಸಾಧ್ಯತೆ 

ಈಗ ಎಲ್ಲಾ ಸೇವೆಗಳನ್ನು ರಾಜಭವನದ ಸಿಬ್ಬಂದಿಗಳೇ ನಿರ್ವಹಿಸುತ್ತಿದ್ದು, ಭದ್ರತಾ ದೃಷ್ಟಿಯಿಂದ ಕೆಲವು ಸಿಬ್ಬಂದಿಗಳು ರಾಜ್ಯಪಾಲರ ಕ್ವಾರ್ಟರ್ಸ್ ನಲ್ಲೇ ಉಳಿಯಲಿದ್ದಾರೆ.

4 ಕೋಟಿ ರೂಪಾಯಿ ಬಜೆಟ್ ನ ಪ್ರಸ್ತಾವನೆಯನ್ನು ಸಿದ್ಧಪಾಡಿಸಲು ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ರಾಜಭವನದಲ್ಲಿ ಕೆಎಸ್ ಟಿಡಿಸಿ ಸೇವೆಗಳು ಇನ್ನು 2 ತಿಂಗಳಲ್ಲಿ ಪ್ರಾರಂಭವಾಗಲಿವೆ. ಪ್ರಸ್ತಾವನೆಯನ್ನು ಅನುಮೋದನೆಗಾಗಿ ರಾಜ್ಯಪಾಲರಿಗೆ 20 ದಿನಗಳ ಒಳಗಾಗಿ ಕಳುಹಿಸಲಾಗುತ್ತದೆ.

SCROLL FOR NEXT