ರಾಜ್ಯ

ಯೋಗ ದಿನ ಕಾರ್ಯಕ್ರಮಕ್ಕೆ ರಾಜಮಾತೆ ಪ್ರಮೋದಾ ದೇವಿ, ಮಹಾರಾಜ ಯದುವೀರ್ ಒಡೆಯರ್ ಗೆ ಆಹ್ವಾನ: ಪ್ರತಾಪ್ ಸಿಂಹ 

Sumana Upadhyaya

ಮೈಸೂರು: ಜೂನ್ 21ರಂದು ಮೈಸೂರು ಅರಮನೆಯ ಎದುರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸುತ್ತಿರುವ ಯೋಗ ದಿನ ಕಾರ್ಯಕ್ರಮದಲ್ಲಿ ಯೋಗ ಮಾಡಲು 12 ಸಾವಿರ ಯೋಗಪಟುಗಳು ದಾಖಲಾತಿ ಮಾಡಿಕೊಂಡಿದ್ದಾರೆ. 3 ಸಾವಿರ ಕೇಂದ್ರ ಸರ್ಕಾರದ ವಿವಿಧ ಉದ್ದಿಮೆಗಳು, ಕಚೇರಿಗಳಿಂದ ಪಟ್ಟಿಯನ್ನು ತೆಗೆದುಕೊಂಡಿದ್ದೇವೆ. ಅರಮನೆ ಹಿಂಭಾಗ ಮತ್ತು ಮುಂಭಾಗ ಸೇರಿ ಪ್ರಾಂಗಣದಲ್ಲಿ 15 ಸಾವಿರ ಜನರಿಗೆ ಯೋಗ ಮಾಡಲು ಅವಕಾಶವಿದೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ನಾಯಕರು, ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಮೈಸೂರು ಅರಮನೆ ಮುಂಭಾಗ ಮತ್ತು ಸುತ್ತಮುತ್ತಲಲ್ಲಿ ಕಾರ್ಯಕ್ರಮ ಸಿದ್ಧತೆಯ ಪರಿಶೀಲನೆ ನಡೆಸಿದರು.

ನಂತರ ಮಾಧ್ಯಮಗಳಿಗೆ ವಿವರ ನೀಡಿದ ಅವರು, ಕಾರ್ಯಕ್ರಮ ಪ್ರವೇಶಕ್ಕೆ ಎರಡು ಗೇಟ್ ಗಳಿವೆ.  ಜಯಮಾರ್ಥಾಂಡ ಗೇಟ್ ನಿಂದ ಪ್ರಧಾನಿಯವರು, ಮುಖ್ಯಮಂತ್ರಿಗಳು, ರಾಜ್ಯಪಾಲರು, ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಖಾತೆ ಸಚಿವರು ಗೇಟ್ ನಿಂದ ಬರುತ್ತಾರೆ. ಉಳಿದ ಎಲ್ಲಾ ವಿಐಪಿಗಳು ಮತ್ತೊಂದು ಗೇಟ್ ನಿಂದ ಬಂದು ಅರಮನೆ ಮುಂಭಾಗದಲ್ಲಿರುವ ಬ್ಲಾಕ್ ನಲ್ಲಿ ಆಸೀನರಾಗುತ್ತಾರೆ. ವೇದಿಕೆ ಕಾರ್ಯಕ್ರಮ ಇರುತ್ತಾರೆ.

ವೇದಿಕೆಯಲ್ಲಿ ಪಿಎಂ, ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು, ಆಯುಷ್ ಇಲಾಖೆ ಸಚಿವರು, ರಾಜ್ಯಪಾಲರು, ರಾಜಮಾತೆ ಪ್ರಮೋದಾ ದೇವಿಯವರು ಮಹಾರಾಜ ಯದುವೀರ್ ರವರು ವೇದಿಕೆಯಲ್ಲಿ ಇರುತ್ತಾರೆ ಎಂದರು.

ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ವಿಶೇಷ ರಕ್ಷಣಾ ಗುಂಪು ಅರಮನೆಯನ್ನು ಸ್ವಾಧೀನಪಡಿಸಿಕೊಂಡು ಮೋದಿ ಭಾಷಣ ಮಾಡುವ ವೇದಿಕೆಯನ್ನು ನಿರ್ಮಿಸಿದೆ. ಪ್ರಧಾನಿಯವರು ಚುನಾಯಿತ ಪ್ರತಿನಿಧಿಗಳು ಇತರ ಯೋಗ ಉತ್ಸಾಹಿಗಳೊಂದಿಗೆ ಸೇರಿಕೊಂಡು ಸುಮಾರು 45 ನಿಮಿಷಗಳ ಕಾಲ ಯೋಗ ಪ್ರದರ್ಶಿಸುತ್ತಾರೆ.

ದೆಹಲಿಯ ಕಾರ್ಯಕ್ರಮ ಸಂಘಟಕರು ಅರಮನೆ ಆವರಣವನ್ನು 17 ಬ್ಲಾಕ್‌ಗಳಾಗಿ ವಿಂಗಡಿಸಿದ್ದಾರೆ.ಕಾರ್ಯಕ್ರಮದ ಮೇಲೆ ಹದ್ದಿನ ಕಣ್ಣಿಡಲು ಬ್ಯಾರಿಕೇಡ್ ಮತ್ತು ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ, ರಾಜ್ಯದ 12,000 ಯೋಗಾಸಕ್ತರು ಮತ್ತು ಕೇಂದ್ರ ಸರ್ಕಾರದ ಇಲಾಖೆಗಳ 3,000 ಮಂದಿ ಭಾಗವಹಿಸಲಿದ್ದಾರೆ. ಅರಮನೆ ಆವರಣದ ಸುತ್ತಲೂ ಎಲ್‌ಇಡಿ ಪರದೆಗಳನ್ನು ಹಾಕಲಾಗಿದೆ.

ರಸ್ತೆಗಳಿಗೆ ಡಾಂಬರೀಕರಣ, ಪ್ರಮುಖ ಬೀದಿಗಳಿಗೆ ದೀಪಾಲಂಕಾರ ಮತ್ತು ಅರಮನೆಯನ್ನು ಅಲಂಕರಿಸಿರುವ ಮೈಸೂರು ಮಹಾನಗರ ಪಾಲಿಕೆ, ನಗರವನ್ನು ಸುಂದರಗೊಳಿಸುವ ಕೆಲಸವನ್ನು ಕೊನೆಯ ಕ್ಷಣದಲ್ಲಿ ಮಾಡುತ್ತಿದೆ. ನಗರದಾದ್ಯಂತ, ಪ್ರಮುಖ ಟ್ರಾಫಿಕ್ ಜಂಕ್ಷನ್‌ಗಳು ಮತ್ತು ಮೋದಿ ಭೇಟಿ ನೀಡುವ ಸ್ಥಳಗಳಲ್ಲಿ ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ. ನಗರ ಪ್ರವೇಶಿಸುವ ಎಲ್ಲ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ.

SCROLL FOR NEXT