ಬೆಂಗಳೂರು: ಕೆಲ ಗುಂಪುಗಳು ರಾಜ್ಯದಲ್ಲಿ ಸೃಷ್ಟಿಸಿರುವ ಅಸ್ಥಿರ ಪರಿಸ್ಥಿತಿಯ ಬಗ್ಗೆ ನಾಗರಿಕ ಸಮಾಜದ ಸದಸ್ಯರು ಶುಕ್ರವಾರ ಕಳವಳ ವ್ಯಕ್ತಪಡಿಸಿದ್ದು, ಕೋಮು ಸೌಹಾರ್ದತೆ ಕಾಪಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿಪತ್ರ ಸಲ್ಲಿಸಿದರು.
ಗುಂಪಿನಲ್ಲಿ ಇತಿಹಾಸಕಾರ ರಾಮಚಂದ್ರ ಗುಹಾ, ಬರಹಗಾರ ಶಶಿ ದೇಶಪಾಂಡೆ, ನಿವೃತ್ತ ಐಎಎಸ್ ಅಧಿಕಾರಿ ಎನ್ಟಿ ಅಬ್ರೂ, ಸಾಕ್ಷ್ಯಚಿತ್ರ ನಿರ್ಮಾಪಕ ಚಂದ್ರು, ಮಾಜಿ ಅಡ್ವೊಕೇಟ್ ಜನರಲ್ ರವಿವರ್ಮ ಕುಮಾರ್, ನಿವೃತ್ತ ಐಪಿಎಸ್ ಅಧಿಕಾರಿ ಫ್ರಾನ್ಸಿಸ್ ಟಿಆರ್ ಕೊಲಾಸೊ, ಪತ್ರಕರ್ತ ಜಿಎನ್ ಮೋಹನ್ ಮತ್ತು ಇತರರು ಇದ್ದರು.
ಸೂಕ್ಷ್ಮ ವಿಚಾರಗಳ ತೆಗೆದುಕೊಳ್ಳಲಾಗುತ್ತಿದ್ದು, ಸ್ವಯಂ ನೇಮಕಗೊಂಡಿರುವ ಧಾರ್ಮಿಕ ಪಾಲಕರು ಮುಕ್ತ ಹಸ್ತ ಪಡೆದುಕೊಂಡು, ಸಮಾಜದ ನಿರ್ದಿಷ್ಟ ವರ್ಗವನ್ನು ಗುರಿಯಾಗಿಸುತ್ತಿದ್ದಾರೆ. ಹೀಗಾಗಿ ಕಾನೂನನ್ನು ಎತ್ತಿಹಿಡಿಯಲು, ದುರ್ಬಲ ನಾಗರಿಕರನ್ನು ರಕ್ಷಿಸಲು ಮತ್ತು ಅಪರಾಧಗಳು, ಕೋಮು ಮತ್ತು ಜಾತಿವಾದಿ ದ್ವೇಷದ ಅಪರಾಧಗಳಿಂದ ಸಂತ್ರಸ್ತರಿಗೆ ನ್ಯಾಯ ಒದಗಿಸಲು, ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸಲು ಪೊಲೀಸರಿಗೆ ನಿರ್ದೇಶನ ನೀಡಬೇಕು.
ಇದನ್ನೂ ಓದಿ: 'ಸರ್ವ ಜನಾಂಗದ ಶಾಂತಿಯ ತೋಟ' ಟ್ಯಾಗ್ ಕಳೆದುಕೊಳ್ಳುತ್ತಿದೆ ಕರ್ನಾಟಕ: ಕೇವಲ 3.4 ವರ್ಷಗಳಲ್ಲಿ 752 ಕೋಮು ಪ್ರಕರಣಗಳು!
ಕೋಮು ಘರ್ಷಣೆಯಲ್ಲಿ ಹಿಂಸಾಚಾರ ಹಾಗೂ ಜೀವಹಾನಿ ಸಂಭವಿಸಿದರೆ, ಶಾಂತಿ ಸೌಹಾರ್ದತೆ ಕಾಪಾಡುವ ಹೊಣೆ ಹೊತ್ತಿರುವ ಸ್ಥಳೀಯ ಅಧಿಕಾರಿಗಳು, ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿ ಹಾಗೂ ಎಸ್ಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಲ್ಲದೆ, ನಿರ್ದಿಷ್ಟ ಸಮುದಾಯಗಳ ಸದಸ್ಯರನ್ನು ಅಮಾನವೀಯಗೊಳಿಸುವ ದ್ವೇಷದ ಭಾಷಣದ ವಿರುದ್ಧ ಮತ್ತು ದೈಹಿಕ ಹಿಂಸೆಗೆ ಪ್ರಚೋದನೆ ನೀಡುವವರ ವಿರುದ್ಧ ತ್ವರಿತ ಮತ್ತು ಬಲವಾದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳು ಈ ಹಿಂದೆ ಘರ್ಷಣೆಗೆ ಕಾರಣವಾಗಿರುವುದರಿಂದ, ಸಾಮಾಜಿಕ ಮತ್ತು ಇತರ ಮಾಧ್ಯಮಗಳ ಮೂಲಕ ಪ್ರಸಾರವಾಗುತ್ತಿರುವ ಅಲ್ಪಸಂಖ್ಯಾತರ ಬಗ್ಗೆ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳ ವಿರುದ್ಧ ತಕ್ಷಣದ ಅರಿವು ಮೂಡಿಸುವ ಪ್ರಯತ್ನವನ್ನೂ ಸರ್ಕಾರ ಮಾಡಬೇಕೆಂದು ಸಲಹೆ ನೀಡಿದರು.