ರಾಜ್ಯ

ಕಾನೂನು ಉಲ್ಲಂಘಿಸಿ ಕಟ್ಟಡ ನಿರ್ಮಾಣ: ನೆರೆಮನೆಯವನನ್ನು ಪ್ರಶ್ನಿಸಿದ ಮಾಜಿ ಐಬಿ ಅಧಿಕಾರಿ ಹತ್ಯೆ

Nagaraja AB

ಮೈಸೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಕಥೆ ಕಟ್ಟಲಾಗಿದ್ದ ಗುಪ್ತಚರ ಬ್ಯೂರೋ ನಿವೃತ್ತ ಸಹಾಯಕ ನಿರ್ದೇಶಕ ಆರ್. ಎನ್. ಕುಲಕರ್ಣಿ ರಸ್ತೆ ಅಪಘಾತದಿಂದ ಮೃತಪಟ್ಟಿಲ್ಲ, ಬದಲಿಗೆ ಅದೊಂದು ಯೋಜಿತ ಕೊಲೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ನವೆಂಬರ್ 4 ರಂದು ವೇಗವಾಗಿ ಬಂದ ಕಾರಿನಿಂದ ಅವರಿಗೆ ಡಿಕ್ಕಿ ಹೊಡೆಯಲಾಗಿತ್ತು. 

ಮೈಸೂರು ಮಹಾನಗರ ಪಾಲಿಕೆ ಕಾನೂನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡುತ್ತಿದ್ದನ್ನು ನೆರೆಮನೆಯವನ್ನು ಪ್ರಶ್ನಿಸಿದ್ದಕ್ಕೆ ಕುಲಕರ್ಣಿ ಅವರ ಕೊಲೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಮೈಸೂರು ವಿವಿಯ ಬಯೋಟೆಕ್ನಾಲಜಿ ವಿಭಾಗದ ಬಳಿ ನಡೆದು ಹೋಗುತ್ತಿದ್ದ ಕುಲಕರ್ಣಿ ಅವರನ್ನು ನವೆಂಬರ್ 4 ರಂದು ಸಂಜೆ 5-30ರ ಸುಮಾರಿನಲ್ಲಿ ವೇಗವಾಗಿ ಬಂದ ಕಾರಿನಿಂದ ಗುದ್ದಿಸಿ  ಹತ್ಯೆ ಮಾಡಲಾಗಿದೆ.

ಆರಂಭದಲ್ಲಿ ವಿವಿ ಪುರಂ ಸಂಚಾರಿ ಪೊಲೀಸರು ಹಿಟ್ ಅಂಡ್ ರನ್ ಕೇಸ್ ದಾಖಲಿಸಿದ್ದರು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸಿಸಿಟಿವಿ ದೃಶ್ಯಾವಳಿಗಳು ಅದು ಕೊಲೆ ಎಂದು ನಿರೂಪಿಸಲು ಪೊಲೀಸರಿಗೆ ನೆರವಾಗಿದೆ. ಅದರಲ್ಲಿ ಕಾರು ಉದ್ದೇಶಪೂರ್ವಕವಾಗಿ ಅಡ್ಡಾದಿಡ್ಡಿಯಾಗಿ ಬಂದು ಕುಲಕರ್ಣಿ ಅವರನ್ನು ಗುದ್ದಿರುವುದು ಕಂಡುಬಂದಿದೆ. ಈ ದೃಶ್ಯಾವಳಿಗಳು ವೈರಲ್ ಆಗುತ್ತಿದ್ದಂತೆಯೇ, ವಿವಿ ಪುರಂ ಸಂಚಾರಿ ಪೊಲೀಸರು ಪ್ರಕರಣವನ್ನು ಜಯಲಕ್ಷ್ಮಿ ಪುರಂ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಅಲ್ಲಿ ಕುಲಕರ್ಣಿ ಅವರ ಅಳಿಯ ಸಂಜಯ್ ಅಂಗಡಿ ದೂರು ದಾಖಲಿಸಿದ್ದರು.  

ಕಾನೂನು ಪ್ರಕಾರ ಜಾಗ ಬಿಡುವಂತೆ ನೆರೆಮನೆಯವ ಮಾದಪ್ಪ ಅವರನ್ನು ಕುಲಕರ್ಣಿ ಮನವಿ ಮಾಡಿದ್ದರು. ಆದರೆ, ಮಾದಪ್ಪ ನಮ್ಮ ಮಾವನ ಮನವಿಗೆ ಸ್ಪಂದಿಸದೆ ಕಾನೂನು ಉಲ್ಲಂಘಿಸಿ ಕಟ್ಟಡ ನಿರ್ಮಾಣವನ್ನು ಆರಂಭಿಸಿದರು. ನಂತರ ಪಾಲಿಕೆಗೆ ದೂರು ಸಲ್ಲಿಸಲಾಗಿತ್ತು. ಅಲ್ಲದೇ, ಹೈಕೋರ್ಟ್ ನಿಂದ ಕಟ್ಟಡ ನಿರ್ಮಾಣಕ್ಕೆ ತಡೆ ತರಲಾಗಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ.  

ಪೊಲೀಸರು ಈ ಸಂಬಂಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ. ಮಾದಪ್ಪ ಹಾಗೂ ಆತನ ಮಕ್ಕಳ ಮೇಲೆ ಸಂಜಯ್ ಅನುಮಾನ ವ್ಯಕ್ತಪಡಿಸಿದ್ದು, ಮೂವರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

SCROLL FOR NEXT