ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯು ರಾಜಕಾಲುವೆ ಮತ್ತು ಬಫರ್ ಜೋನ್ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕಳೆದ ಕೆಲವು ವಾರಗಳಿಂದ ‘ಮರು ಸಮೀಕ್ಷೆ’ ನೆಪದಲ್ಲಿ ಸ್ಥಗಿತಗೊಳಿಸಲಾಗಿದೆ.
ಮಹದೇವಪುರ ವಲಯದಲ್ಲಿ ಎರಡು ತಿಂಗಳ ಹಿಂದೆ ಪ್ರಾರಂಭವಾಗಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಈಗ ಸ್ಥಗಿತಗೊಳಿಸಲಾಗಿದೆ. ಹಲವರು ಬಿಬಿಎಂಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೇವಲ ಕೆಲವು ಸಣ್ಣ ಪುಟ್ಟ ಜನರನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
“ಇಕೋಸ್ಪೇಸ್ ಮತ್ತು ಇತರ ದೊಡ್ಡ ಆಸ್ತಿಗಳನ್ನು ತೆರವು ಮಾಡಲು ಗುರುತು ಹಾಕಲಾಗಿತ್ತು. ಆದರೆ ತೆರವು ಮಾಡಿಲ್ಲ. ಬಡವರು ವಾಸಿಸುವ ಪ್ರದೇಶಗಳಲ್ಲಿ ಮಾತ್ರ ಬಿಬಿಎಂಪಿ ಬುಲ್ಡೋಜರ್ಗಳು ಘರ್ಜಿಸುತ್ತಿವೆ. ದೊಡ್ಡ ಅತಿಕ್ರಮಣಕಾರರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಮಹದೇವಪುರದ ನಿವಾಸಿ ಮತ್ತು ಕಾರ್ಯಕರ್ತ ಅಶೋಕ್ ಮೃತ್ಯುಂಜಯ ಆರೋಪಿಸಿದ್ದಾರೆ.
ಇದನ್ನು ಓದಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಕರ ನಿರ್ಧಾರಕನಿಗೆ 40 ಲಕ್ಷ ರೂ ದಂಡ, 4 ವರ್ಷ ಜೈಲು ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯ
ವರ್ತೂರಿನ ಮತ್ತೋರ್ವ ನಿವಾಸಿ ಜಗದೀಶ್ ರೆಡ್ಡಿ ಮಾತನಾಡಿ, ಬಿಬಿಎಂಪಿ ಕಾರ್ಯಾಚರಣೆ ಕೈಬಿಟ್ಟು ದೊಡ್ಡ ಅತಿಕ್ರಮಣಕಾರರನ್ನು ರಕ್ಷಿಸುತ್ತಿದೆ. ''ವರ್ತೂರಿನಲ್ಲಿ 40 ಅಡಿಗೂ ಹೆಚ್ಚು ಅಳತೆಯ ದೊಡ್ಡ ಚರಂಡಿಗಳನ್ನು ಒತ್ತುವರಿ ಮಾಡಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಮುಂದಿನ ವರ್ಷದ ಮಳೆಗಾಲದಲ್ಲಿ ಮತ್ತೆ ಪ್ರವಾಹ ಉಂಟಾಗಬಹುದು ಎಂದಿದ್ದಾರೆ.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ನಗರ ತಜ್ಞ ಅಶ್ವಿನ್ ಮಹೇಶ್, ಅತಿಕ್ರಮಣಕ್ಕೆ ಬಿಬಿಎಂಪಿ ಮತ್ತು ಕಂದಾಯ ಇಲಾಖೆ ಎರಡೂ ಹೊಣೆ ಎಂದು ಹೇಳಿದ್ದಾರೆ.
“ಕಂದಾಯ ಇಲಾಖೆಯು ತನ್ನ ಬಳಿ ಉಪಕರಣಗಳಿಲ್ಲ, ಸಾಧನಗಳಿಲ್ಲ ಮತ್ತು ವಿವಿಧ ಸರ್ವೆ ನಂಬರ್ಗಳ ಬಗ್ಗೆ ಮಾಹಿತಿ ಇಲ್ಲ ಎಂಬಂತೆ ವರ್ತಿಸುತ್ತದೆ. ಬಿಬಿಎಂಪಿ ಕೂಡ ಇದೇ ಧೋರಣೆಯನ್ನು ಪ್ರದರ್ಶಿಸುತ್ತಿದೆ" ಎಂದು ಮಹೇಶ್ ಹೇಳಿದ್ದಾರೆ.