ರಾಜ್ಯ

ಜನರಿಗೆ ಅಧಿಕ ಲಾಭದ ಆಮಿಷವೊಡ್ಡಿ ವಂಚನೆ; ಇಡಿಯಿಂದ ಹೂಡಿಕೆ ಸಂಸ್ಥೆ ಎಂ.ಡಿ ಬಂಧನ

Shilpa D

ಬೆಂಗಳೂರು: ಭಾರಿ ಹಣ ವಂಚನೆ ಹಗರಣದ ಆರೋಪಿ ಇಂಜಾಜ್ ಇಂಟರ್‌ನ್ಯಾಷನಲ್‌ನ ವ್ಯವಸ್ಥಾಪಕ ನಿರ್ದೇಶಕ ಮಿಸ್ಬಾಉದ್ದೀನ್ ಎಂಬಾತನನ್ನು ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ನ.11ರ ತನಕ ವಶಕ್ಕೆ ಪಡೆದಿದ್ದಾರೆ.

ಹೂಡಿಕೆದಾರರಿಗೆ ಭಾರಿ ಮೊತ್ತದ ಹಣ ಹಿಂದಿರುಗಿಸುವ ಆಮಿಷವೊಡ್ಡಿ ವಂಚಿಸುತ್ತಿದ್ದ ಆರೋಪದಲ್ಲಿ ಇಂಜಾಜ್‌ ಇಂಟರ್‌ನ್ಯಾಷನಲ್ ಮತ್ತು ಅಸೋಸಿಯೇಟ್ಸ್ ಗ್ರೂಪ್‌ ವಿರುದ್ಧ  2017ರಲ್ಲಿ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ಮಿಸ್ಬಾಹುದ್ದೀನ್‌ರನ್ನು ಬೆಂಗಳೂರಿನ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನವೆಂಬರ್ 19 ರವರೆಗೆ ಇಡಿ ಕಸ್ಟಡಿಗೆ ನೀಡಲಾಗಿದೆ. ಈ ಸಂಬಂಧ ಯಲಹಂಕ ತಹಶೀಲ್ದಾರ್ ಕಚೇರಿಯ ಕಂದಾಯ ಅಧಿಕಾರಿ ಅನಂತ ಪದ್ಮನಾಭ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಇ.ಡಿ ಪ್ರಕರಣ ದಾಖಲಿಸಿಕೊಂಡಿತ್ತು. ‌ಸಾವಿರಾರು ಮಂದಿಗೆ 250 ಕೋಟಿಯಷ್ಟು ವಂಚಿಸುತ್ತಿದ್ದ ಆರೋಪದಲ್ಲಿ ಮಿಸ್ಬಾ ಉದ್ದೀನ್ ಬಂಧಿತರಾಗಿದ್ದರು.

ಅಕ್ರಮ ಹಣ ವರ್ಗಾವಣೆ ಮತ್ತು ಇತರ ಆರ್ಥಿಕ ಅಪರಾಧಗಳ ತನಿಖೆ ನಡೆಸುತ್ತಿರುವ ಕೇಂದ್ರೀಯ ಸಂಸ್ಥೆಯಾದ ಜಾರಿ ನಿರ್ದೇಶನಾಲಯವು ಬೆಂಗಳೂರಿನಲ್ಲಿ ಇಂಜಾಜ್ ಇಂಟರ್‌ನ್ಯಾಶನಲ್ ಮತ್ತು ಸಂಬಂಧಿತ ಗುಂಪಿನ ವಿರುದ್ಧ ದಾಖಲಾದ ಎಫ್‌ಐಆರ್ ಆಧಾರದ ಮೇಲೆ ಪ್ರಕರಣದಲ್ಲಿ ತನಿಖೆಯನ್ನು ಪ್ರಾರಂಭಿಸಿದೆ. ಬೆಂಗಳೂರು ನಗರದ ವಿಲ್ಸನ್ ಗಾರ್ಡನ್ ಪೋಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ, ಪ್ರಶಸ್ತಿ ಚಿಟ್‌ಗಳು ಮತ್ತು ಹಣ ಚಲಾವಣೆ ಯೋಜನೆಗಳು (ನಿಷೇಧಿಸುವುದು) ಕಾಯಿದೆ, 1978, ಚಿಟ್ ಫಂಡ್ಸ್ ಆಕ್ಟ್- 1982 ಮತ್ತು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 420 ರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

SCROLL FOR NEXT