ರಾಜ್ಯ

ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಗೋಮೂತ್ರದಿಂದ ಟ್ಯಾಂಕ್ ಸ್ವಚ್ಛ: ಘಟನೆ ಖಂಡಿಸಿ ಗ್ರಾಮದಲ್ಲಿದ್ದ ಎಲ್ಲಾ‌ ಟ್ಯಾಂಕ್'ಗಳಿಂದ 'ನೀರು‌ ಕುಡಿದ ದಲಿತರು!    

Manjula VN

ಮೈಸೂರು: ಚಾಮರಾಜನಗರ ತಾಲೂಕಿನ ಹೆಗ್ಗೊಠಾರ ಗ್ರಾಮದಲ್ಲಿ ಮೇಲ್ವರ್ಗದ ಸದಸ್ಯರು ದಲಿತ ಮಹಿಳೆಯೊಬ್ಬರು ನೀರು ಕುಡಿದರೆಂದು ಗೋಮೂತ್ರದಿಂದ ಟ್ಯಾಂಕ್ ಶುದ್ಧೀಕರಿಸಿರುವುದನ್ನು ದಲಿತ ಯುವಕರು ಖಂಡಿಸಿದ್ದು, ಭಾನುವಾರ ಗ್ರಾಮಕ್ಕೆ ತೆರಳಿ ಅಲ್ಲಿನ ಎಲ್ಲಾ ಟ್ಯಾಂಕ್ ಗಳಲ್ಲಿನ ನೀರನ್ನು ಕುಡಿದಿದ್ದಾರೆ.

ಚಾಮರಾಜನಗರ ತಹಶೀಲ್ದಾರ್ ಬಸವರಾಜ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಯುವಕರು ಪೊಲೀಸರೊಂದಿಗೆ ಗ್ರಾಮಕ್ಕೆ ತೆರಳಿದ್ದರು. ಅಲ್ಲದೆ, ಟ್ಯಾಂಕ್‌ಗಳು ಸಾರ್ವಜನಿಕ ಬಳಕೆಗಾಗಿ ಇದ್ದು, ಇದರಿಂದ ಯಾರು ಬೇಕಾದರೂ ನೀರನ್ನು ಕುಡಿಯಬಹುದು ಎಂಬ ಸಂದೇಶವನ್ನು ನೀಡಿದರು.

ಸಮಾಜದ ಮುಖಂಡರ ಜತೆ ಸಭೆ ನಡೆಸಿದ ಅಧಿಕಾರಿಗಳು, ಕೆಲವರ ದುಷ್ಕೃತ್ಯಗಳಿಗೆ ಇಡೀ ಗ್ರಾಮವೇ ದೂಷಿಸಬಾರದು ಎಂದು ಹೇಳಿದರು.

ಗಿರಿಯಪ್ಪ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣದ ಆರೋಪಿ ಮಹದೇವಪ್ಪ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭವಿಷ್ಯದಲ್ಲಿ ಗ್ರಾಮದಲ್ಲಿ ಕೋಮು ಗಲಭೆಯಾಗದಂತೆ ನೋಡಿಕೊಳ್ಳಬೇಕು ಎಂದು ಮುಖಂಡರಿಗೆ ತಿಳಿಸಿದ ಅಧಿಕಾರಿಗಳು, ಸಾಮಾಜಿಕ ಸಾಮರಸ್ಯದ ಸಂದೇಶ ಸಾರಲು ದಲಿತ ಯುವಕರಿಗೆ ಗ್ರಾಮಗಳಲ್ಲಿದ್ದ ಎಲ್ಲಾ ಟ್ಯಾಂಕ್ ಗಳಲ್ಲಿ ನೀರು ಕುಡಿಯುವಂತೆ ತಿಳಿಸಿದರು.

ಸಚಿವರಿಂದ ತನಿಖೆಗೆ ಆದೇಶ
ಈ ನಡುವೆ ಭಾನುವಾರ ಚಾಮರಾಜನಗರಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು, ಘಟನೆ ಬಗ್ಗೆ ಅಧಿಕಾರಿಗಳ ಮಾಹಿತಿ ಪಡೆದುಕೊಂಡಿದ್ದು, ತನಿಖೆಗೆ ಆದೇಶಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಪಡೆದುಕೊಂಡಿದ್ದೇನೆ. ಘಟನೆಯ ಕುರಿತು ತನಿಖೆ ನಡೆಸಿ ಅಪರಾಧದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಇದೊಂದು ವಿಷಾದನೀಯ ಘಟನೆ ಎಂದು ಸಚಿವ ಸೋಮಣ್ಣ ಅವರು ಹೇಳಿದ್ದಾರೆ.

ಶುಕ್ರವಾರ ಹೆಚ್.ಡಿ.ಕೋಟೆ ತಾಲೂಕಿನ ಸರಗೂರಿನಿಂದ ಕೆಲವು ದಲಿತರು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಗ್ರಾಮಕ್ಕೆ ಆಗಮಿಸಿದ್ದಾಗ ಈ ಘಟನೆ ನಡೆದಿತ್ತು.

ಸಮಾರಂಭದ ನಂತರ, ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮಹಿಳೆಯೊಬ್ಬರು ಲಿಂಗಾಯತ ಬೀದಿಯಲ್ಲಿ (ಬೀದಿ) ಟ್ಯಾಂಕ್‌ನಿಂದ ನೀರು ಕುಡಿದಿದ್ದರು.

ಈ ವೇಳೆ ಆ ಪ್ರದೇಶದ ನಿವಾಸಿಯೊಬ್ಬರು ಇತರರನ್ನು ಕರೆದು ಟ್ಯಾಂಕ್‌ನಲ್ಲಿನ ನೀರು ಹಾಳು ಮಾಡಿದ್ದಾರೆಂದು ಮಹಿಳೆಯನ್ನು ನಿಂದಿಸಿದ್ದರು. ನಂತರ ಮಹಿಳೆ ಗ್ರಾಮವನ್ನು ತೊರೆದಾಗ ಟ್ಯಾಂಕ್ ನಲ್ಲಿನ ನೀರನ್ನು ಖಾಲಿ ಮಾಡಿ ಗೋಮೂತ್ರದಿಂದ ಸ್ವಚ್ಛಗೊಳಿಸಿದ್ದರು.

SCROLL FOR NEXT