ರಾಜ್ಯ

ಬೆಂಗಳೂರು: ಪ್ರತ್ಯೇಕ ಅಪಘಾತ; ನಾಲ್ವರ ಸಾವು

Manjula VN

ಬೆಂಗಳೂರು: ನಗರದಲ್ಲಿ ಮಂಗಳವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಮೊದಲ ಅಪಘಾತದಲ್ಲಿ ತಾವರೆಕೆರೆಯ ಮಾಗಡಿ ರಸ್ತೆ ಜಂಕ್ಷನ್ ಬಳಿ ಮಧ್ಯಾಹ್ನ 2.30 ರ ವೇಳೆಗೆ ಬಿಎಂಟಿಸಿ ಬಸ್ಸೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸೋಲಾರ್ ಪ್ಯಾನಲ್ ಕಂಪನಿಯ ಇಬ್ಬರು ಉದ್ಯೋಗಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರನ್ನು ಗೊಲ್ಲರಹಟ್ಟಿ ನಿವಾಸಿಗಳಾದ ಮಂಜುನಾಥ್ (29) ಮತ್ತು ಶಿವರಾಜ್ (25) ಎಂದು ಗುರ್ತಿಸಲಾಗಿದೆ. ಮೃತರು ಸುಂಕದಕಟ್ಟೆಯಲ್ಲಿ ಸೋಲಾರ್ ಪ್ಯಾನಲ್ ಕಂಪನಿಗೆ ಭೇಟಿ ನೀಡಿ ಮನೆಗೆ ಮರಳುತ್ತಿದ್ದರು ಎಂದು ತಿಳಿದುಬಂದಿದೆ.

ಬೈಕ್ ಚಲಾಯಿಸುತ್ತಿದ್ದ ಮಂಜುನಾಥ್, ನೈಸ್ ರಸ್ತೆ ಪ್ರವೇಶಿಸಲು ಹಸಿರು ಬಣ್ಣದ ಸಿಗ್ನಲ್‌ಗಾಗಿ ಕಾಯುತ್ತಿದ್ದರು. ಇದೇ ವೇಳೆ ಅಜಾಗರೂಕತೆಯಿಂದ ಚಾಲನೆ ಮಾಡಿದ ಬಿಎಂಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದು ಇಬ್ಬರ ಮೇಲೆ ಹರಿದಿದೆ. ಈ ನಡುವೆ ದಾರಿಹೋಕರು ಚಾಲಕನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.

ಮತ್ತೊಂದು ಅಪಘಾತದಲ್ಲಿ, ದೇವನಹಳ್ಳಿ ರಸ್ತೆಯಲ್ಲಿ ವೇಗವಾಗಿ ಬಂದ ಕ್ಯಾಂಟರ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ದೊಡ್ಡಬಳ್ಳಾಪುರದ ನಿವಾಸಿಗಳಾದ ರಾಕೇಶ್ ಮತ್ತು ಪ್ರತಾಪ್ ಮೃತಪಟ್ಟಿದ್ದಾರೆ.

ಇವರಿಬ್ಬರೂ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಮುಂಜಾನೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೊಸಕೋಟೆ ಕಡೆಗೆ ಹೋಗುತ್ತಿದ್ದ ಕ್ಯಾಂಟರ್ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತ ಸಂಭವಿಸಿದ ಕೂಡಲೇ ಕ್ಯಾಂಟರ್ ಚಾಲಕ ಪರಾರಿಯಾಗಿದ್ದಾನೆ. ದೇವನಹಳ್ಳಿ ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

SCROLL FOR NEXT