ರಾಜ್ಯ

ಮೈಸೂರಿನಲ್ಲಿ ಭಾರತ್ ಜೋಡೋ ಯಾತ್ರೆ: ಚಾಮುಂಡೇಶ್ವರಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ರಾಹುಲ್ ಗಾಂಧಿ

Ramyashree GN

ಮೈಸೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ ಪಕ್ಷದ ಭಾರತ್ ಜೋಡೋ ಯಾತ್ರೆಯ ಮೂರನೇ ದಿನವಾದ ಸೋಮವಾರ ಇಲ್ಲಿನ ಚಾಮುಂಡಿ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ರಾಹುಲ್ ಗಾಂಧಿ ಅವರೊಂದಿಗೆ ಬೆಂಬಲಿಗರು ಮತ್ತು ಪಕ್ಷದ ಮುಖಂಡರು ಇದ್ದರು.
ಚಾಮುಂಡೇಶ್ವರಿ ದೇವಿಯು ಮೈಸೂರು ರಾಜಮನೆತನ ಮತ್ತು ಹಲವಾರು ಶತಮಾನಗಳಿಂದ ಮೈಸೂರಿನ ಅಧಿದೇವತೆ.

ದೇವಾಲಯಕ್ಕೆ ಭೇಟಿ ನೀಡಿದ ನಂತರ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಗಾಂಧಿ, 'ಧಾರ್ಮಿಕ ಸಾಮರಸ್ಯವು ಭಾರತದ ಶಾಂತಿಯುತ ಮತ್ತು ಪ್ರಗತಿಪರ ಭವಿಷ್ಯದ ಅಡಿಪಾಯವಾಗಿದೆ' ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿಯವರು ತಮ್ಮ 26ನೇ ದಿನದ ಯಾತ್ರೆಯನ್ನು ಬೆಳಗಿನ ಜಾವದಲ್ಲಿಯೇ ಆರಂಭಿಸಿದರು ಮತ್ತು 10 ದಿನಗಳ ದಸರಾ ಆಚರಣೆಗಾಗಿ ಅಲಂಕೃತವಾಗಿರುವ ಹಳೆಯ ಪಟ್ಟಣದ ಬೀದಿಗಳಲ್ಲಿ ನಡೆದರು. ರಾಹುಲ್ ಅವರನ್ನು ಸ್ವಾಗತಿಸಲು ರಸ್ತೆಯ ಇಕ್ಕೆಲಗಳಲ್ಲಿ ಜನರು ಸಾಲುಗಟ್ಟಿ ನಿಂತಿದ್ದರು.

ಯಾತ್ರೆಯು ಈವರೆಗೆ ಕರ್ನಾಟಕದಲ್ಲಿ 62 ಕಿಮೀ ಹಾಗೂ ತಮಿಳುನಾಡು ಮತ್ತು ಕೇರಳದಲ್ಲಿ 532 ಕಿಮೀ ಕ್ರಮಿಸಿದೆ.

ಭಾನುವಾರ ರಾತ್ರಿ ಧಾರಾಕಾರ ಮಳೆಯ ನಡುವೆಯೇ ಇಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ತಮ್ಮ ಭಾಷಣವನ್ನು ಮುಂದುವರಿಸಿದರು.

SCROLL FOR NEXT