ರಾಜ್ಯ

ಆಯುಧ ಪೂಜೆ, ವಿಜಯದಶಮಿ ಎಫೆಕ್ಟ್: ಬೆಂಗಳೂರಿನಲ್ಲಿ ಸುಮಾರು 200 ಟನ್ ತ್ಯಾಜ್ಯ ಸಂಗ್ರಹ

Nagaraja AB

ಬೆಂಗಳೂರು: ಈ ವರ್ಷ ದಸರಾವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗಿದ್ದು, ಯಾವುದೇ ಕೋವಿಡ್ ನಿರ್ಬಂಧಗಳಿಲ್ಲದೆ ಹಬ್ಬ ನಡೆಸಿದ್ದರಿಂದ, ವಿವಿಧೆಡೆ ಮತ್ತು ಮಾರುಕಟ್ಟೆಗಳಲ್ಲಿ ರಾಶಿ ರಾಶಿ ತ್ಯಾಜ್ಯ ಬಿದಿದ್ದು ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಮೂರು ದಿನಗಳ ಆಚರಣೆ ಕಾರಣ ಹೆಚ್ಚಿನ ತ್ಯಾಜ್ಯ ಸಂಗ್ರಹವಾಗಿರುವುದರಿಂದ ಟನ್‌ಗಟ್ಟಲೆ ಹಸಿರು ತ್ಯಾಜ್ಯವನ್ನು ತೆರವುಗೊಳಿಸದೆ ಮಾರುಕಟ್ಟೆ ಸ್ಥಳಗಳಲ್ಲಿ ಬಿಡಲಾಗಿದೆ ಬಿಬಿಎಂಪಿ ಹೇಳಿದೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಬಿಬಿಎಂಪಿ ಚೀಪ್ ಮಾರ್ಷಲ್, ಪಾಲಿಕೆ ವ್ಯಾಪ್ತಿಯಲ್ಲಿ ದಸರಾ ವೇಳೆಯಲ್ಲಿ ಸುಮಾರು 500 ಟನ್ ನಷ್ಟು ಹೆಚ್ಚುವರಿ ಆರ್ದ್ರ ತ್ಯಾಜ್ಯ ಅಥವಾ ಹಸಿರು ತ್ಯಾಜ್ಯ ಸಂಗ್ರಹವಾಗಿದೆ. ನಿನ್ನೆ ಒಂದೇ ದಿನ 200 ಟನ್ ನಷ್ಟು ತೆರವುಗೊಳಿಸಲಾಗಿದೆ. ಉಳಿದಿದ್ದನ್ನು ಇಂದು ತೆರವುಗೊಳಿಸಲಾಗುವುದು ಎಂದು ಹೇಳಿದರು.  ಅನೇಕ ಪೌರಕಾರ್ಮಿಕರು ಹಬ್ಬ ಆಚರಿಸುತ್ತಿದ್ದು, ಗುತ್ತಿಗೆದಾರರು ಪೂಜೆಯಲ್ಲಿ ತೊಡಗಿದ್ದರಿಂದ ತ್ಯಾಜ್ಯ ತೆರವು ಕಾರ್ಯಕ್ಕೆ ಹೊಡೆತ ಬಿದ್ದಿದೆ. ತ್ಯಾಜ್ಯ ನಿರ್ವಹಣೆಗೆ ತೊಂದರೆಯಾಗಿದ್ದರೂ ಗುರುವಾರದೊಳಗೆ ಇದನ್ನು ತೆರವುಗೊಳಿಸಲಾಗುವುದು ಎಂದು ಮುಖ್ಯ ಮಾರ್ಷಲ್ ಹೇಳಿದರು.

ಘನತ್ಯಾಜ್ಯ ನಿರ್ವಹಣಾ ಆಯುಕ್ತ ಹರೀಶ್ ಕುಮಾರ್ ಮಾತನಾಡಿ, ಅನೇಕ ಕಡೆಗಳಲ್ಲಿ ವ್ಯಾಪಾರಿಗಳು ಬಾಳೆ ಕಂಬ, ಮಾವಿನ ಸೊಪ್ಪು, ಹೂವು ಮಾರಾಟ ಮಾಡಿದ ನಂತರ ತ್ಯಾಜ್ಯವನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು. ಪೂಜೆ ನಂತರ ಸಣ್ಣ ಪ್ರದೇಶ ಮತ್ತು ಬೀದಿಗಳಲ್ಲಿ ಜನರು ಬೂದು ಗುಂಬಳ ಬಿಟ್ಟು ಹೋಗಿದ್ದರು. ಪೌರಕಾರ್ಮಿಕರು ಅರ್ಧ ದಿನ ರಜೆ ಹಾಕಿದ್ದರಿಂದ ಅಲ್ಲಿ ಕಸದ ರಾಶಿ ಬಿದ್ದಿತ್ತು. ಮಾರುಕಟ್ಟೆ ಸ್ಥಳಗಳಂತಹ ಕೇಂದ್ರೀಕೃತ ಪ್ರದೇಶಗಳಲ್ಲಿ ದೊಡ್ಡ ಕಸದ ರಾಶಿ ಕಂಡುಬಂದಿವೆ. ಪ್ರಾಣಿಗಳ ತ್ಯಾಜ್ಯದಂತೆ ಹಸಿರು ತ್ಯಾಜ್ಯ ದುರ್ವಾಸನೆ ಬೀರುವುದಿಲ್ಲ ಮತ್ತು ಅದನ್ನು ಚೆನ್ನಾಗಿ ನಿರ್ವಹಿಸಲಾಗುತ್ತದೆ ಮತ್ತು ಸಂಸ್ಕರಿಸಿದ ನಂತರ ಗೊಬ್ಬರವಾಗಿ ಬಳಸಬಹುದು ಎಂದು ಅವರು ಹೇಳಿದರು.

ಕೆ.ಆರ್.ಮಾರುಕಟ್ಟೆ, ಆರ್.ಟಿ.ನಗರ, ಸಿಬಿಐ ರಸ್ತೆ,  ಮಡಿವಾಳ ಮಾರುಕಟ್ಟೆ, ಮಲ್ಲೇಶ್ವರಂ, ಯಶವಂತಪುರ, ಬಸವನಗುಡಿ ಹಾಗೂ ಬಿಬಿಎಂಪಿ ಮತ್ತಿತರ ಕಡೆಗಳಲ್ಲಿ ದಸರಾ ತ್ಯಾಜ್ಯ ಕಂಡುಬಂದಿದ್ದು, ಇಂದಿನೊಳಗೆ ಅವುಗಳನ್ನು ತೆರವುಗೊಳಿಸುವಂತೆ ಗುತ್ತಿಗೆದಾರರಿಗೆ ಬಿಬಿಎಂಪಿ ಸೂಚಿಸಿದೆ. 

SCROLL FOR NEXT