ರಾಜ್ಯ

ಮಹಾ ಕುಂಭ ಮೇಳಕ್ಕೆ ಚಾಲನೆ; ಕರ್ನಾಟಕದಲ್ಲೂ ಧಾರ್ಮಿಕ ಕಾರಿಡಾರ್ ಅಭಿವೃದ್ಧಿಯತ್ತ ಚಿಂತನೆ: ಶಶಿಕಲಾ ಜೊಲ್ಲೆ

Nagaraja AB

ಕೆ.ಆರ್.ಪೇಟೆ:  ಮಂಡ್ಯ ಜಿಲ್ಲೆ ಕೆ. ಆರ್. ಪೇಟೆ ತಾಲೂಕಿನ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ನಾಲ್ಕು ದಿನಗಳ ಐತಿಹಾಸಿಕ ಮಹಾ ಕುಂಭ ಮೇಳಕ್ಕೆ ರಾಜ್ಯಸಭಾ ಸದಸ್ಯರು ಆಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವಿರೇಂದ್ರ ಹೆಗ್ಗಡೆ ಇಂದು ಚಾಲನೆ ನೀಡಿದರು.  

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ, ಪ್ರಧಾನಿ ನರೇಂದ್ರ ಮೋದಿ ಅವರ ಮುತುವರ್ಜಿಯಿಂದ ದೇಶದಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ಪುನರುಜೀವನಗೊಳಿಸುತ್ತಿರುವಂತೆ ಕರ್ನಾಟಕ ರಾಜ್ಯದಲ್ಲೂ ಧಾರ್ಮಿಕ ಕಾರಿಡಾರ್ ಗಳ ಅಭಿವೃದ್ದಿಗೆ ಮುಖ್ಯಮಂತ್ರಿ ಒಲವು ತೋರಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಅವಕಾಶಗಳ ಬಗ್ಗೆ ವರದಿ ನೀಡುವಂತೆ ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು  ತಿಳಿಸಿದರು. 

2014ರಲ್ಲಿ ಪ್ರಧಾನಿ ಸ್ಥಾನ ವಹಿಸಿಕೊಂಡಾಗಿನಿಂದಲೂ ನರೇಂದ್ರ ಮೋದಿ ಹಲವಾರು ಹಿಂದೂ ದೇವಾಲಯಗಳ ಗತ ವೈಭವ ಮರಳುವಂತೆ ಕ್ರಮ ವಹಿಸಿದ್ದಾರೆ. ಪ್ರಖ್ಯಾತ ದೇವಸ್ಥಾನಗಳ ಜೀರ್ಣೋದ್ಧಾರವೂ ನಡೆದಿದೆ.  ಕಾಶಿ ವಿಶ್ವನಾಥ್ ಧಾಮ, ಕೇದಾರನಾಥ್ ದೇವಾಲಯ, ಸೋಮನಾಥ ದೇವಾಲಯ ಜೇರ್ಣೋದ್ಧಾರ ನಡೆಸಲಾಗುತ್ತಿದೆ. ಇದೇ ರೀತಿಯಲ್ಲಿ ನಮ್ಮ ರಾಜ್ಯದಲ್ಲೂ ಧಾರ್ಮಿಕ ಕಾರಿಡಾರ್ ಅಭಿವೃದ್ಧಿಯತ್ತ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು. 

ಕಳೆದ 10 ವರ್ಷಗಳಲ್ಲೇ ಅತಿ ಹೆಚ್ಚು ಅನುದಾನ ನೀಡುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮುಜರಾಯಿ ಇಲಾಖೆ ವಿಶೇಷ ಒತ್ತು ನೀಡಿದೆ. ಇದರಿಂದಾಗಿ ಹತ್ತು ಹಲವು ವಿಶೇಷ ಯೋಜನೆಗಳನ್ನು  ಪ್ರಾರಂಭಿಸಲು ಸಾಧ್ಯವಾಗಿದೆ. ರಾಜ್ಯದಲ್ಲೂ ಕಾಶಿ, ಉಜ್ಜೈನಿಯಂತಹ ಕಾರಿಡಾರ್ ಅಭಿವೃದ್ಧಿ ನಿಟ್ಟಿನಲ್ಲಿ ಮುಖ್ಯಮಂತ್ರಿ ಒಲವು ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ದೇವಸ್ಥಾನಗಳ ಸಮಗ್ರ ಅಭಿವೃದ್ಧಿ ಕನಸನ್ನು ಸಾಕಾರಾಗೊಳಿಸುವುದು ನಮ್ಮ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
 

SCROLL FOR NEXT