ಕನ್ನಡ ಸಾಹಿತ್ಯ ಸಮ್ಮೇಳನ (ಸಂಗ್ರಹ ಚಿತ್ರ) 
ರಾಜ್ಯ

ಸಮಿತಿ ರಚನೆಯಲ್ಲಿ ವಿಳಂಬ, ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಮೇಲೆ ಕರಿಛಾಯೆ

ಮುಂದಿನ ವರ್ಷ ಜನವರಿ 6 ರಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದು ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ...

ಹಾವೇರಿ: ಮುಂದಿನ ವರ್ಷ ಜನವರಿ 6 ರಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದು ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಘೋಷಿಸಿದ್ದರೂ, ಇದುವರೆಗೂ ಯಾವುದೇ ಸಮಿತಿಗಳನ್ನು ರಚಿಸದಿರುವುದು ಸ್ಥಳೀಯ ಘಟಕಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರ ಘೋಷಿಸಿದ ಮೂರನೇ ಪರಿಷ್ಕೃತ ದಿನಾಂಕ ಇದಾಗಿದೆ. ಆದರೆ ಸಮಿತಿ ರಚಿಸಲು ವಿಳಂಬ ಮಾಡುತ್ತಿರುವುದರಿಂದ ಹಾವೇರಿಯ ಕನ್ನಡಪರ ಸಂಘಟನೆಗಳು ಈ ಬಾರಿ ಘೋಷಿಸಿದ ದಿನಾಂಕಗಳಲ್ಲಿ ಸಮ್ಮೇಳನ ನಡೆಯುವುದೇ ಎಂಬ ಅನುಮಾನ ವ್ಯಕ್ತಪಡಿಸಿವೆ.

ಸಮ್ಮೇಳನ ಆಯೋಜನೆಗೆ ಮೊದಲೇ ರಚಿಸಬೇಕಿದ್ದ ಹಲವು ಸಮಿತಿಗಳನ್ನು ಇನ್ನೂ ರಚಿಸಿಲ್ಲ. ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಪ್ರಚಾರ ಸಮಿತಿಯ ಸಭೆ ನಡೆದಿತ್ತು. ಆದರೆ ಸಮ್ಮೇಳನವನ್ನು ನಿರಂತರವಾಗಿ ಮುಂದೂಡುತ್ತಿರುವುದರಿಂದ ಸಮ್ಮೇಳನದ ಮೇಲೆ ಕರಿಛಾಯೆ ಆವರಿಸಿದೆ.

ಇದೇ ಮೊದಲಲ್ಲ, ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ವಿಳಂಬ ಅಥವಾ ದಿನಾಂಕ ಬದಲಾವಣೆಯಾಗುತ್ತಿದೆ. ಆಂತರಿಕ ಕಲಹದಿಂದ ಈ ಹಿಂದೆ ಎರಡು ಬಾರಿ ಕನ್ನಡ ಹಬ್ಬ ನಡೆಸುವ ಅವಕಾಶವನ್ನು ನಗರ ‘ಕಳೆದುಕೊಂಡಿದೆ’. 

ಸಾಂಕ್ರಾಮಿಕ ರೋಗ ಮತ್ತಿತರ ಕಾರಣಗಳಿಂದ ಕಳೆದ ಮೂರು ವರ್ಷಗಳಿಂದ ನಡೆಯದಿರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಒಂದು ತಿಂಗಳಿಂದ ಇನ್ನೊಂದು ತಿಂಗಳಿಗೆ ಮುಂದೂಡುತ್ತಿರುವುದು ಸರ್ಕಾರದ ಗಂಭೀರತೆಯನ್ನು ತೋರಿಸುತ್ತದೆ. 

ಈ ಮಧ್ಯೆ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರು ಸಮ್ಮೇಳನದ ಕುರಿತು ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಬಾರದು ಎಂದು ಸ್ಥಳೀಯ ಪರಿಷತ್ ಸದಸ್ಯರಿಗೆ ಸೂಚಿಸಿದ್ದಾರೆ. ಆದರೆ ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಸಮ್ಮೇಳನದ ದಿನಾಂಕವನ್ನು ಮತ್ತೆ ಮುಂದೂಡಲು ಸರ್ಕಾರ ಬಯಸಿದೆ ಎಂದು ಹೆಸರು ಹೇಳಲು ಇಚ್ಛಿಸದ ಹಾವೇರಿಯ ಹಿರಿಯ ಸಾಹಿತಿಯೊಬ್ಬರು ಹೇಳಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅವರು ಹಾವೇರಿಯವರೇ ಆಗಿರುವುದರಿಂದ ಅದ್ಧೂರಿ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ. ಆದರೆ ಸಮ್ಮೇಳನ ನಡೆಸಲು ವಿಳಂಬ ಮಾಡಿರುವುದು ಮತ್ತು ಈ ಹಿಂದೆ ಘೋಷಿಸಿದ ದಿನಾಂಕಗಳನ್ನು ಪದೇಪದೆ ಬದಲಾಯಿಸಿರುವುದು ಪ್ರತಿಯೊಬ್ಬರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಇದು ಮುಂಬರುವ ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ ಮತ್ತು ಕನ್ನಡ ಪ್ರೇಮಿಗಳಿಗೆ ಅವಮಾನ'' ಎಂದು ಲೇಖಕರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT