ರಾಜ್ಯ

ಪೌಷ್ಟಿಕ ಆಹಾರದ ಎಫೆಕ್ಟ್: ಅರ್ಜುನನ ತೂಕ 160 kg ಹೆಚ್ಚಳ, ಬಾಕಿ ಆನೆಗಳ ತೂಕದಲ್ಲೂ ಗಣನೀಯ ಏರಿಕೆ

Srinivasamurthy VN

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಅರ್ಜುನ ಆನೆಯ ತೂಕ 160 kg ಹೆಚ್ಚಳವಾಗಿದೆ.

ಮೈಸೂರು ದಸರಾ ಹಿನ್ನಲೆಯಲ್ಲಿ ಮೈಸೂರು ಅರಮನೆಗೆ ಆಗಮಿಸಿರುವ ದಸರಾ ಆನೆಗಳ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿದ್ದು, ಆನೆಗಳು ಅರಮನೆಗೆ ಆಗಮಿಸಿ ಒಂದು ತಿಂಗಳೊಳಗೆ ಅವುಗಳ ತೂಕ ಗಣನೀಯವಾಗಿ ಹೆಚ್ಚಳವಾಗಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಎರಡನೇ ತಂಡದ ಆನೆಗಳಿಗೆ ನಿನ್ನೆ ತೂಕ ಹಾಕುವ ಪ್ರಕ್ರಿಯೆ ನಡೆದಿದ್ದು, ಈ ವೇಳೆ ಮೊದಲ ತಂಡದಲ್ಲಿ ಆಗಮಿಸಿದ ಆನೆಗಳ ತೂಕವು ನಡೆಯಿತು. ಮೈಸೂರಿನ ಧನ್ವಂತ್ರಿಯಲ್ಲಿನ ವೇ ಬ್ರಿಡ್ಜ್‌ನಲ್ಲಿ ಅಂದರೆ ಲಾರಿಗಳಿಗೆ ತೂಕ ಹಾಕುವ ವೇವ್‌ ಬ್ರಿಡ್ಜ್‌ನಲ್ಲಿ ದಸರಾ ಗಜಪಡೆಗಳ ತೂಕ ಪ್ರಕ್ರಿಯೆ ನಡೆದಿದ್ದು, ಈ ಬಾರಿಯೂ ಅರ್ಜನನೇ ಬಲಶಾಲಿ ಅಂತ ನಿರೂಪಿಸಿದ್ದಾನೆ. 

ತೂಕದಲ್ಲಿ ಅರ್ಜುನನೇ ಬಲಶಾಲಿಯಾಗಿದ್ದು, ಬರೋಬ್ಬರಿ 5885 ಕೆ.ಜಿ ತೂಕ ಹೊಂದಿದ್ದಾನೆ. ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು 5000, ಚೈತ್ರ 3235, ಭೀಮಾ 4345, ಗೋಪಾಲಸ್ವಾಮಿ 5460, ಮಹೇಂದ್ರ 4450, ವಿಜಯ 2760, ಗೋಪಿ 4670, ಧನಂಜಯ 4890, ಶ್ರೀರಾಮ 4475, ಲಕ್ಷ್ಮಿ 3150, ಸುಗ್ರೀವ 4785, ಕಾವೇರಿ 3245 ತೂಕವನ್ನು ಹೊಂದಿವೆ. ಇನ್ನು ಈ ಗಜಪಡೆಯಲ್ಲಿ ಕಿರಿಯವನಾಗಿರುವ ಪಾರ್ಥಸಾರಥಿ 3445 ಕೆಜಿ ತೂಕವನ್ನು ಹೊಂದಿದ್ದಾನೆ ಎಂದು ತಿಳಿದುಬಂದಿದೆ.

ಈ ಕುರಿತು ಡಿಸಿಎಫ್ ಡಾ.ವಿ. ಕರಿಕಾಳನ್ ಮಾತನಾಡಿ, ಈ ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಮೊದಲು ಮತ್ತು ಎರಡನೇ ತಂಡದ ಆನೆಗಳು ಒಟ್ಟು ಸೇರಿ 14 ಆನೆಗಳನ್ನು ನಾವು ತೂಕ ಮಾಡಿದ್ದೇವೆ. ಎರಡನೇ ತಂಡದ ಎಲ್ಲ ಗಂಡಾನೆಗಳೂ 4000 ದಿಂದ 4600 ಸಾವಿರ ಕೆಜಿವರೆಗೂ ಇದ್ದು, ಕಿರಿಯ ವಯಸ್ಸಿನ ಆನೆಯಾಗಿರುವ ಪಾರ್ಥಸಾರಥಿ ಆನೆ 3445 ತೂಕ ಹೊಂದಿದೆ. ಮೊದಲನೇ ತಂಡದ ಎಲ್ಲ ಆನೆಗಳ ತೂಕದಲ್ಲಿ ಹೆಚ್ಚಾಗಿದ್ದು, ನಮ್ಮ ತಾಲೀಮುಗಳಿಗೂ ಕೂಡ ತುಂಬಾ ಚೆನ್ನಾಗಿ ಸಹಕರಿಸುತ್ತಿವೆ ಎಂದು ತಿಳಿಸಿದ್ದಾರೆ.

ಈ ದಿನ ಮೊದಲನೇ ಬಾರಿಗೆ ಎಲ್ಲ 14 ಆನೆಗಳನ್ನು ತೂಕ ಮಾಡುವ ಸಲುವಾಗಿ ಅರಮನೆಯಿಂದ ಹೊರ ಕರೆತಂದಿದ್ದು, ಶ್ರೀರಾಮ ಮತ್ತು ಪಾರ್ಥಸಾರಥಿ ಆನೆಗಳು ಮೊದಲನೇ ತಂಡದ ಆನೆಗಳ ಜೊತೆ ಸೇರಿ ನಿನ್ನೆಯಿಂದಲೇ ತಾಲೀಮಿನಲ್ಲಿ ಭಾಗವಹಿಸಿವೆ. ಸೆ. 12 ರಿಂದ ಎಲ್ಲ ಆನೆಗಳು ತಾಲೀಮಿನಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದರು.

SCROLL FOR NEXT