ರಾಜ್ಯ

ತುಮಕೂರು: ಕಳಪೆ ಕಾಮಗಾರಿಗೆ ಸಚಿವ ಜೆ.ಸಿ. ಮಾಧುಸ್ವಾಮಿ ವಿರುದ್ಧ ಬಿಜೆಪಿ ಮುಖಂಡ ವಾಗ್ದಾಳಿ

Ramyashree GN

ತುಮಕೂರು: ತುಮಕೂರಿನಲ್ಲಿ ಬಿಜೆಪಿಯೊಳಗೆ ಗುಸುಗುಸು ಶುರುವಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಪ್ರತಿನಿಧಿಸುವ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಶಾಸಕ ಕೆ.ಎಸ್.ಕಿರಣಕುಮಾರ್ ವಾಗ್ದಾಳಿ ನಡೆಸಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಮಾಧುಸ್ವಾಮಿ ಅವರಿಗಾಗಿ ತಮ್ಮ ಸ್ಥಾನವನ್ನು 'ತ್ಯಾಗ' ಮಾಡಿದ್ದ ಕಿರಣ್‌ಕುಮಾರ್, ಈಗ 2023ರ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿಯಿಂದ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಕಿರಣ್ ಅವರಿಗೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಉನ್ನತ ನಾಯಕತ್ವದ ಬೆಂಬಲ ಇರುವುದರಿಂದ ಅವರಿಗೇ ಟಿಕೆಟ್ ಸಿಗಬಹುದು ಎಂದು ಮೂಲಗಳು ತಿಳಿಸಿವೆ.

ಹುಳಿಯಾರು ಪಟ್ಟಣದಲ್ಲಿ ಮಂಗಳವಾರ ನಡೆದ ಅವರ 59ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ಅವರು ಮಾಡಿದ ಭಾಷಣದ ವಿಡಿಯೋ ವೈರಲ್ ಆಗಿದೆ. ಭಾಷಣದಲ್ಲಿ ಅವರು, 'ಹಲವಾರು ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಇತ್ತೀಚೆಗೆ ಹಾಕಲಾದ ರಸ್ತೆಗಳು ಈಗಾಗಲೇ ಹಾಳಾಗಿವೆ. ತಮ್ಮ ಉಸ್ತುವಾರಿಯಲ್ಲೇ ಕಾಮಗಾರಿ ನಡೆದಿರುವುದರಿಂದ ಗುತ್ತಿಗೆದಾರರನ್ನು ಪ್ರಶ್ನಿಸುವ ನೈತಿಕ ಹಕ್ಕು ಸಚಿವರಿಗೆ ಇಲ್ಲ' ಎಂದಿದ್ದಾರೆ.

'ಸಚಿವರ ಸ್ವಗ್ರಾಮ ಜೆ.ಸಿ.ಪುರಕ್ಕೆ ಪೈಪ್‌ಲೈನ್ ಮೂಲಕ ನೀರು ಕೊಂಡೊಯ್ಯುವ ಯೋಜನೆ ಜಾರಿಯಾಗಿದೆ. ಆದರೆ ನೈಸರ್ಗಿಕ ಕಾಲುವೆಗಳ ಮೂಲಕ ಗ್ರಾಮಕ್ಕೆ ನೀರು ಸರಬರಾಜು ಮಾಡುವುದು ಕಡಿಮೆ ವೆಚ್ಚದಾಯಕ ಮತ್ತು ಆದರ್ಶಪ್ರಾಯವಾಗುತ್ತಿತ್ತು' ಎಂದಿದ್ದಾರೆ.

ಮಾಧುಸ್ವಾಮಿ ವಿರುದ್ಧ ಶೀತಲ ಸಮರ ನಡೆಸುತ್ತಿರುವ ತುಮಕೂರು ಸಂಸದ ಜಿ.ಎಸ್.ಬಸವರಾಜು, ಮಾಜಿ ಶಾಸಕ ಬಿ.ಸುರೇಶ್ ಗೌಡ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

SCROLL FOR NEXT