ರಾಜ್ಯ

ಸುರಕ್ಷಿತ ದಸರಾ: ಜನಸಂದಣಿಯಲ್ಲಿ ಕ್ರಿಮಿನಲ್ ಗಳ ಪತ್ತೆಗೆ ಮೈಸೂರು ಪೊಲೀಸರಿಂದ ಬೆರಳಚ್ಚು ಸ್ಕ್ಯಾನ್ ಬಳಕೆ

Srinivas Rao BV

ಮೈಸೂರು: ಈ ಬಾರಿಯ ಮೈಸೂರು ದಸರಾವನ್ನು ಸುರಕ್ಷಿತ ಹಾಗೂ ತೊಂದರೆ ಇಲ್ಲದಂತೆ ನಡೆಸುವುದಕ್ಕೆ ಮೈಸೂರು ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ವೈಭವದ ದಸರಾವನ್ನು ಕಣ್ತುಂಬಿಕೊಳ್ಳುವುದಕ್ಕೆ ಸಹಸ್ರಾರು ಮಂದಿ ಮೈಸೂರಿಗೆ ಆಗಮಿಸುತ್ತಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕಾನೂನು ಸುವ್ಯವಸ್ಥೆ ಸವಾಲಿನ ಸಂಗತಿಯೇ ಸರಿ. ಇಂತಹ ಸಮಯಕ್ಕಾಗಿಯೇ ಕಾಯುವ ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ನಿಯಂತ್ರಿಸುವುದು ಪೊಲೀಸರಿಗೆ ಹೆಚ್ಚಿನ ಒತ್ತಡದ ವಿಷಯ. 

ದಸರಾ ಹಿನ್ನೆಲೆಯಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳವರ ಮೇಲೆ ಕಣ್ಣಿಡುವುದಕ್ಕಾಗಿ ಪೊಲೀಸರು ಕಣ್ಗಾವಲು ಹೆಚ್ಚಿಸುವುದರ ಜೊತೆಗೆ, ಸ್ಮಾರ್ಟ್ ಪರಿಹಾರವೊಂದನ್ನು ಕಂಡುಕೊಂಡಿದ್ದಾರೆ. ಅದೇ ಬೆರಳಚ್ಚು ಸ್ಕ್ಯಾನ್! 

ನಗರದಾದ್ಯಂತ ಅಡ್ಡಾಡುವ ಶಂಕಿತ ವ್ಯಕ್ತಿಗಳನ್ನು ಗುರುತಿಸುವುದಕ್ಕಾಗಿ ಪೊಲೀಸರು ಬೆರಳಚ್ಚು ಸ್ಕ್ಯಾನ್ ನ್ನು ಬಳಕೆ ಮಾಡುತ್ತಿದ್ದಾರೆ.  ನಗರದಲ್ಲಿ ಅನುಮಾನ ಮೂಡಿಸುವಂತೆ ಅಡ್ಡಾಡುವ ವ್ಯಕ್ತಿಗಳ ಗುರುತನ್ನು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಿನ ಸಂಗತಿಯಾಗಿದ್ದು, ವಿವರಗಳನ್ನು ಪಡೆಯಲು ವಿಚಾರಣೆ ನಡೆಸಬೇಕಾಗುತ್ತದೆ. ಅಷ್ಟೇ ಅಲ್ಲದೇ ವಿವರ ಪಡೆದ ಬಳಿಕ ಕ್ರಿಮಿನಲ್ ರೆಕಾರ್ಡ್ ಗಳನ್ನು ಜಲಗಾಡಬೇಕಾಗುತ್ತದೆ. 

ಈಗ ಮೊಬೈಲ್-ಕ್ರೈಮ್ & ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ವ್ಯವಸ್ಥೆ (ಎಂ-ಸಿಸಿಟಿಎನ್ಎಸ್)     ನಲ್ಲಿ ಕ್ರಿಮಿನಲ್ ಗಳ ಡೇಟಾ ಬೇಸ್ ಇದ್ದು, ಅನುಮಾನಾಸ್ಪದ ವ್ಯಕ್ತಿಯ ಬೆರಳಚ್ಚು ಸ್ಕಾನ್ ಮಾಡಿ ಆತನ ಕ್ರಿಮಿನಲ್ ಹಿನ್ನೆಲೆಯಲ್ಲಿ ಪರಿಶೀಲಿಸಬಹುದಾಗಿದೆ. 

ಒಂದು ವೇಳೆ ಆ ನಿರ್ದಿಷ್ಟ ವ್ಯಕ್ತಿಗೆ ಕ್ರಿಮಿನಲ್ ಹಿನ್ನೆಲೆ ಇದ್ದದ್ದೇ ಆದಲ್ಲಿ, ಪ್ರಕರಣದ ಸಂಖ್ಯೆ ಸೇರಿದಂತೆ ಅದರ ಸಂಪೂರ್ಣ ವಿವರಗಳ ಬಗ್ಗೆ ಪೊಲೀಸರಿಗೆ ಅಲರ್ಟ್ ಬರಲಿದೆ.

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಈ ಉಪಕರಣವನ್ನು ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಬಳಕೆ ಮಾಡಲಾಗುತ್ತಿದ್ದು, ಪ್ರಮುಖವಾಗಿ ರಾತ್ರಿ ಪಾಳಿಯಲ್ಲಿರುವವರಿಗೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. 

ಕಳೆದ ಒಂದು ವರ್ಷದಲ್ಲಿ 5,920 ಅನುಮಾನಾಸ್ಪದ ವ್ಯಕ್ತಿಗಳು ಅಡ್ಡಾಡುತ್ತಿದ್ದದ್ದು ಪತ್ತೆಯಾಗಿದ್ದು, ಈ ಪೈಕಿ 160 ಮಂದಿಯ ಬೆರಳಚ್ಚು ಈ ಹಿಂದಿನ ಅಪರಾಧ ಪ್ರಕರಣಗಳ ಡೇಟಾ ಬೇಸ್ ಗೆ ಹೊಂದಾಣಿಕೆಯಾಗಿದೆ. 

SCROLL FOR NEXT