ರಾಜ್ಯ

ಟಿಕೆಟ್ ಘೋಷಣೆಯಾಗದಿದ್ದರೂ ನಾಮಪತ್ರ ಸಲ್ಲಿಸಿದ ಗಂಗಾಂಬಿಕೆ: ಲಿಂಗಾಯತರ ಲಾಬಿಗೆ ಮಣಿಯುತ್ತಾ ಕಾಂಗ್ರೆಸ್ ಹೈಕಮಾಂಡ್!

Manjula VN

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಏರುತ್ತಿದ್ದು, ಗುರುವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಲಿಂಗಾಯತರಿಗೆ ಶೇ.70ರಷ್ಟು ಟಿಕೆಟ್ ಗಳನ್ನು ನೀಡಬೇಕೆಂಬ ಬೇಡಿಕೆಗಳು ಕೇಳಿ ಬಂದಿದ್ದು, ಈ ನಡುವಲ್ಲೇ ಬಿಬಿಎಂಪಿ ಮಾಜಿ ಮೇಯರ್ ಗಂಗಾಂಬಿಕೆಯವರು ಟಿಕೆಟ್ ಅಧಿಕೃತವಾಗಿ ಘೋಷಣೆ ಆಗದಿದ್ದರೂ, ಗುರುವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಪ್ರಚಾರ ಸಮಿತಿ ಮುಖ್ಯಸ್ಥ ಎಂ.ಬಿ.ಪಾಟೀಲ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಕಾಂಗ್ರೆಸ್‌ನಲ್ಲೇ ಇರುವ ವೀರಶೈವ ಮಹಾಸಭಾ, ಲಿಂಗಾಯತ ಮುಖಂಡರು ಗಂಗಾಂಬಿಕೆ ಪರ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರಂತೆ ಗಂಗಾಂಬಿಕೆಯವರು ಮಾಡಿರುವ ಕಾರ್ಯ ಹಾಗೂ ಸಾಧನೆಗಳನ್ನು ಸ್ಮರಿಸಿದ್ದಾರೆ.

ಚಿಕ್ಕಪೇಟೆ ಕ್ಷೇತ್ರಕ್ಕೆ ಮಾಜಿ ಶಾಸಕ ಆರ್ ವಿ ದೇವರಾಜ್ ಮತ್ತು ಗಂಗಾಂಬಿಕೆ ಮಲ್ಲಿಕಾರ್ಜುನ್ ಇಬ್ಬರು ಹೆಸರುಗಳನ್ನು ಕಾಂಗ್ರೆಸ್ ಸಮಿತಿ ಪ್ರಸ್ತಾಪಿಸಿದ್ದು, ಚಿಕ್ಕಪೇಟೆಗೆ ಅಭ್ಯರ್ಥಿಗಳು ಇನ್ನೂ ಘೋಷಣೆಯಾಗದ ಕಾರಣ ಕ್ಷೇತ್ರ ಮುಕ್ತವಾಗಿದೆ.

ವೀರಶೈವ ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ ಮಾತನಾಡಿ, ‘ನಗರದಲ್ಲಿ 28 ಸ್ಥಾನಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಸಮುದಾಯದವರಿದ್ದಾರೆ. ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದರೆ, ಅದು ಪಕ್ಷಕ್ಕೆ ಅನುಕೂಲಕರವಾಗಲಿದೆ ಎಂದು ಹೇಳಿದ್ದಾರೆ.

ನಾಳೆ ರಜೆ. ಏಪ್ರಿಲ್19-20ರವರೆಗೆ ಅಮವಾಸ್ಯೆಯ ಇರುವುದರಿಂದ ಮಂಗಳಕರ ದಿನವಾಗಿದ್ದರಿಂದ ನಾಮಪತ್ರ ಸಲ್ಲಿಸಿದ್ದೇನೆಂದು ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಹೇಳಿದ್ದಾರೆ.

ಪಕ್ಷದಿಂದ ಬೆಂಬಲ ಪಡೆಯುವ ಕುರಿತ ಪ್ರಶ್ನೆಗೆ ಉತ್ತರಿಸಿ, ಪಕ್ಷದ ನಾಯಕರೊಂದಿಗೆ ಸಮಾಲೋಚನೆ ನಡೆಸುತ್ತೇನೆ. ಅವರ ಸೂಚನೆಯಂತೆಯೇ ನಡೆಯುತ್ತೇನೆಂದು ತಿಳಿಸಿದ್ದಾರೆ.

ಗಂಗಾಂಬಿಕೆ ನಾಮಪತ್ರ ಸಲ್ಲಿಕೆ ಕುರಿತು ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಗಂಗಾಂಬಿಕೆ ಪಕ್ಷದ ನಿಷ್ಠಾವಂತ ಕಾರ್ಯಕರ್ತೆ. ಪಕ್ಷ ಅವರನ್ನು ಅಭ್ಯರ್ಥಿಯಾಗಿ ಪರಿಗಣಿಸದಿದ್ದರೆ, ನಾಮಪತ್ರ ಹಿಂಪಡೆಯುವಂತೆ ಕೇಳಿಕೊಳ್ಳಬೇಕಾಗಬಹುದು ಎಂದು ಹೇಳಿದ್ದಾರೆ.

SCROLL FOR NEXT