ರಾಜ್ಯ

ಒಳ ಮೀಸಲಾತಿ ಕಿಚ್ಚು: ಬಿಜೆಪಿಗೆ ಮತ ಹಾಕದಂತೆ ಭಕ್ತರಿಗೆ ಸೂಚಿಸಿದ ಶ್ರೀಗಳ ವಿರುದ್ಧ ಪ್ರಕರಣ ದಾಖಲು

Manjula VN

ಗದಗ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಲಂಬಾಣಿ ಸಮುದಾಯದ ಶ್ರೀಗಳೊಬ್ಬರ ವಿರುದ್ಧ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

ಒಳಮೀಸಲಾತಿ ಘೋಷಣೆ ವೇಳೆ ಲಂಬಾಣಿ, ಕೊರಮ, ಕೊರಚ, ಮುಸ್ಲಿಮರಿಗೆ ಪಕ್ಷ ನ್ಯಾಯ ಮಾಡಿರುವ ಕಾರಣ ಬಿಜೆಪಿಗೆ ಮತ ಹಾಕದಂತೆ ಆದರಹಳ್ಳಿ ಗವಿಮಠದ ಶ್ರೀ ಕುಮಾರ ಮಹಾರಾಜರು ಸಾರ್ವಜನಿಕ ಸಭೆಯಲ್ಲಿ ಭಕ್ತರಿಗೆ ಹೇಳಿದ್ದರು.

ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಏಪ್ರಿಲ್ 14 ರಂದು ಪ್ರತಿಭಟನೆಗೆ ಕರೆ ನೀಡಲು ಹೆಚ್ಚಿನ ಜನರನ್ನು ಒಟ್ಟುಗೂಡಿಸುವಂತೆ ಭಕ್ತರಿಗೆ ತಿಳಿಸಿದ್ದರು ಎಂದು ತಿಳಿದುಬಂದಿದೆ.

ಈ ಕುರಿತು ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಒಳ ಮೀಸಲಾತಿಯಿಂದ ಕಿಚ್ಚಿಗೆ ತುಪ್ಪ ಸವರಿದಂತಾಗಿದೆ.

ಒಳಮೀಸಲಾತಿ ಆದೇಶ ವಿರೋಧಿಸಿ ಶಿರಹಟ್ಟಿ ಮತಕ್ಷೇತ್ರದ ಲಂಬಾಣಿ, ಕೊರಚ, ಕೊರಮ, ಜತೆಗೆ ಮುಸ್ಲಿಂ ಜನಾಂಗದವರನ್ನು ಒಳಗೊಂಡು ಲಕ್ಷ್ಮೇಶ್ವರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಸಮಾಜದ ನಿರ್ಧಾರವನ್ನು ಜನಾಂಗದವರಿಗೆ ತಿಳಿಸುವ ವೇಳೆ ಸ್ವಾಮೀಜಿ ಈ ರೀತಿ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಾರುತಿ ರಾಠೋಡ್ ಅವರು ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದರಂತೆ ಶ್ರೀಗಳ ವಿರುದ್ಧ ಐಪಿಸಿ ಮತ್ತು ಜನಪ್ರತಿನಿಧಿ ಕಾಯ್ದೆ 1951 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

‘ನಮಗೆ ಅನ್ಯಾಯ ಮಾಡಿರುವ ಬಿಜೆಪಿ ನಾಯಕರಿಗೆ ಸಮುದಾಯದವರು ಮತ ಹಾಕಬಾರದು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಭಕ್ತರೊಬ್ಬರು ಹೇಳಿದ್ದಾರೆ.

ಗದಗದ ಬಿಜೆಪಿ ಮುಖಂಡ ಸಿದ್ದು ಗದಗ ಮಾತನಾಡಿ, ಸ್ವತಃ ಅನೈತಿಕವಾಗಿರುವವರು ಪಕ್ಷದತ್ತ ಬೆರಳು ತೋರಿಸಬಾರದು. ಅವರಿಗೆ ಏನಾದರೂ ಬೇಕಾದರೆ, ಅವರು ಕಾರ್ಯವಿಧಾನವನ್ನು ಅನುಸರಿಸಬೇಕು. ವಿಶೇಷವಾಗಿ ಚುನಾವಣಾ ಸಮಯದಲ್ಲಿ ಯಾರ ಮೇಲೂ ಆರೋಪ ಮಾಡಬಾರದು ಎಂದು ಕಿಡಿಕಾರಿದ್ದಾರೆ.

SCROLL FOR NEXT