ಬೆಂಗಳೂರು: ಭಾರತದ ಆರ್ಥಿಕತೆಯ ಭವಿಷ್ಯದ ದೃಷ್ಟಿಯಿಂದ ಕರ್ನಾಟಕ ಪ್ರಮುಖ ರಾಜ್ಯವಾಗಿದ್ದು, ಭಾರತವನ್ನು ಮುನ್ನಡೆಸಲು ನೆರವು ನೀಡುವಲ್ಲಿ ಬೆಂಗಳೂರು ಜ್ಞಾನ ನಗರವಾಗಿದೆ. ಹೀಗಾಗಿ ಇಲ್ಲಿಗೆ ಸ್ಥಿರ ಸರ್ಕಾರದ ಅಗತ್ಯವಿದ್ದು, ಸ್ಥಿರ ಸರ್ಕಾರಕ್ಕಾಗಿ ಬಿಜೆಪಿಗೆ ಮತ ನೀಡಬೇಕೆಂದು ಕಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಹೇಳಿದ್ದಾರೆ.
ಬ್ರಿಗೇಡ್ ಗೇಟ್ವೇ ಅಪಾರ್ಟ್ಮೆಂಟ್ನಲ್ಲಿ ಮಲ್ಲೇಶ್ವರಂ ಬಿಜೆಪಿ ಅಭ್ಯರ್ಥಿ ಡಾ.ಅಶ್ವತ್ಥ್ ನಾರಾಯಣ್ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕಕ್ಕೆ ಸ್ಥಿರ ಸರ್ಕಾರದ ಅಗತ್ಯವಿದೆ. ಈ ಸ್ಥಿರ ಸರ್ಕಾರಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದು ಹೇಳಿದರು.
ಬಳಿಕ ಪ್ರಧಾನಿ ಮೋದಿಯವರನ್ನು ಶ್ಲಾಘಿಸಿದ ಅವರು, ಮೋದಿ ಅವರು ಕಡಿಮೆ ಅವಧಿಯಲ್ಲಿ ಸಾಧಿಸಿದ್ದನ್ನು ಕಾಂಗ್ರೆಸ್ ಕಳೆದ ಏಳು ದಶಕಗಳಲ್ಲಿ ಮಾಡುವಲ್ಲಿ ವಿಫಲವಾಗಿತ್ತು ಎಂದು ಹೇಳಿದರು.
ಇದನ್ನೂ ಓದಿ: ಭ್ರಷ್ಟಾಚಾರ, ಬೆಲೆ ಏರಿಕೆ ಚುನಾವಣೆ ವಿಚಾರಗಳೇ ಅಲ್ಲ, ಜನತೆ ಕಾಂಗ್ರೆಸ್'ನ್ನು ತಿರಸ್ಕರಿಸಲಿದೆ: ಅರುಣ್ ಸಿಂಗ್
"ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಲಾಕ್ಡೌನ್, ಯುದ್ಧ-ಸಂಬಂಧಿತ ಸಮಸ್ಯೆಗಲು ಮತ್ತು ಆರ್ಥಿಕ ಹಿಂಜರಿತಗಳ ಹೊರತಾಗಿಯೂ, ಭಾರತವು ಮುಂದುವರಿಯುತ್ತಿದೆ. ಇದು ನಮ್ಮ ರಾಜಕೀಯ ಬದ್ಧತೆ, ಚಿಂತನೆ ಮತ್ತು ಸ್ಥಿರ ಸರ್ಕಾರದಿಂದಾಗಿ ಆಗಿದೆ.2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ಪ್ರಧಾನಿ ಮೋದಿಯವರ ಕನಸಾಗಿದೆ. ಕೇಂದ್ರ ಸರ್ಕಾರ ಲಸಿಕೆಗಳನ್ನು ನೀಡುತ್ತಿದ್ದು, ವರ್ಕ್ ಫ್ರಮ್ ಹೋಮ್, ಡಿಜಿಟಲ್ ಆರ್ಥಿಕತೆಯನ್ನು ಉತ್ತೇಜಿಸಿದೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಅಶ್ವತ್ಥ್ ನಾರಾಯಣ್ ಅವರು, ಬಿಜೆಪಿಗೆ ಮತ ಹಾಕುವಂತೆ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಮನವಿ ಮಾಡಿದರು.
ನೀವು ಬಿಜೆಪಿಗೆ ಹಾಕುವ ಮತಗಳು ಬೆಂಗಳೂರು ಮತ್ತು ಕರ್ನಾಟಕವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತವೆ” ಎಂದು ಹೇಳಿದರು.