ರಾಜ್ಯ

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಸಮಸ್ಯೆಗೆ ಇಲಾಖೆಯೊಳಗಿನ ಸಮನ್ವಯ ಕೊರತೆ ಮುಖ್ಯ ಕಾರಣ: ಕೆಎಸ್ಎಂಎಸ್ ಸಿಎಲ್

Sumana Upadhyaya

ಬೆಂಗಳೂರು: ಔಷಧ ಕಂಪೆನಿಗಳಿಗೆ ಸರಿಯಾಗಿ ಪಾವತಿ ಮಾಡದಿರುವುದು, ಹಣ ಪಾವತಿಯಲ್ಲಿ ವಿಳಂಬಕ್ಕೆ ಸರ್ಕಾರದ ಇಲಾಖೆಯೊಳಗಿನ ಸಮನ್ವಯ ಕೊರತೆ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿಂಜರಿಕೆಯೇ ಮುಖ್ಯ ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (KSMSCL) ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ಎಸ್ ವಟಾರೆ ತಿಳಿಸಿದ್ದಾರೆ. 

ಆರೋಗ್ಯ ಇಲಾಖೆಯ ಅಡಿಯಲ್ಲಿ ಆರೋಗ್ಯ ಸಂಸ್ಥೆಗಳಿಗೆ ಔಷಧಿಗಳು, ಉಪಭೋಗ್ಯ ವಸ್ತುಗಳು ಮತ್ತು ಸಲಕರಣೆಗಳ ಖರೀದಿಯ ನೋಡಲ್ ಏಜೆನ್ಸಿಯಾದ ಕೆಎಸ್ ಎಂಎಸ್ ಸಿಎಲ್, 2020ರಲ್ಲಿ ಕಾರ್ಯಾಚರಣೆ ಆರಂಭಿಸಿದಲ್ಲಿಂದ ದೀರ್ಘಕಾಲದ ಬಾಕಿ ಪಾವತಿಗಳು ಮತ್ತು ಕೆಲಸದಲ್ಲಿ ಪಾರದರ್ಶಕತೆಯ ಕೊರತೆಯಿಂದಲೇ ಸುದ್ದಿಯಲ್ಲಿದೆ.

ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕ (SAAK) ಇತ್ತೀಚೆಗೆ ಬಿಡುಗಡೆ ಮಾಡಿದ ಸಮೀಕ್ಷೆಯ ವರದಿಯಲ್ಲಿ ಅನೇಕ ಸರ್ಕಾರಿ ಆರೋಗ್ಯ ಸೌಲಭ್ಯಗಳು ಉಚಿತ ಔಷಧಿಗಳ ಕೊರತೆಯನ್ನು ಎದುರಿಸುತ್ತಿವೆ, ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳು ಅನಿವಾರ್ಯವಾಗಿ ತಮ್ಮ ಖರ್ಚಿನಿಂದ ಔಷಧಿಗಳನ್ನು ಖರೀದಿಸಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ. ಜುಲೈನಲ್ಲಿ ಕರ್ನಾಟಕದ 11 ಜಿಲ್ಲೆಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ 598 ಜನರನ್ನು ಸಂದರ್ಶಿಸಲಾಗಿದ್ದು, ಅವರು ಹಣ ಕೊಟ್ಟು ಔಷಧಿ ಖರೀದಿಸಿದ್ದಾರೆ.  ಒಟ್ಟು 2.58 ಲಕ್ಷ ರೂಪಾಯಿಗಳಲ್ಲಿ ಪ್ರತಿ ವ್ಯಕ್ತಿ ಸರಾಸರಿ 433 ರೂಪಾಯಿ ಖರ್ಚು ಮಾಡಿದ್ದಾರೆ. 

2023-24ನೇ ಸಾಲಿನಲ್ಲಿ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಖರೀದಿಸುವ ವಾರ್ಷಿಕ ಟೆಂಡರ್ ಕೂಡ ಜುಲೈನಲ್ಲಿ ಪೂರ್ಣಗೊಳ್ಳಬೇಕಿತ್ತು, ಆದರೆ ಇನ್ನೂ ಪೂರ್ಣಗೊಂಡಿಲ್ಲ. ವರ್ಷದ ವಾರ್ಷಿಕ ಇಂಡೆಂಟ್ ಅವಶ್ಯಕತೆಯ ಶೇಕಡಾ 25 ರಷ್ಟು ಪ್ರಮಾಣವನ್ನು ಅಲ್ಪಾವಧಿಯ ಟೆಂಡರ್‌ಗಳ ಮೂಲಕ ಪೂರೈಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಎಲ್ಲಾ ಗೋದಾಮುಗಳಿಗೆ 85 ಅಗತ್ಯ ಔಷಧಗಳನ್ನು ಸರಬರಾಜು ಮಾಡಲಾಗಿದೆ ಎಂದು ವಟಾರೆ ಹೇಳಿದರು. ಒಟ್ಟು 733 ಔಷಧಿಗಳ ಪೈಕಿ 500 ಔಷಧಿಗಳ ಖರೀದಿಯನ್ನು ಆಗಸ್ಟ್ ಅಂತ್ಯದ ವೇಳೆಗೆ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ಉಳಿದ 233 ಔಷಧಗಳನ್ನು ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಇಲಾಖೆಯಲ್ಲಿನ ಪಾವತಿ ವಿಳಂಬ ಮತ್ತು ಇತರ ಕಾರಣದ ಬಗ್ಗೆ ವಟಾರೆ, ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿದೆ. ಜವಾಬ್ದಾರಿಯನ್ನು ತಪ್ಪಿಸಲು ಅಧಿಕಾರಿಗಳು ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುತ್ತಾರೆ ಎಂದರು.

ಜುಲೈ 2023 ರಲ್ಲಿ ಅಧಿಕಾರ ವಹಿಸಿಕೊಂಡ ಒಂದು ತಿಂಗಳೊಳಗೆ ಅವರು 92 ಕೋಟಿ ಮೌಲ್ಯದ ಬಿಲ್‌ಗಳನ್ನು ತೆರವುಗೊಳಿಸಿದ್ದಾರೆ. ಇನ್ನೂ ಅನೇಕ ಬಿಲ್ ಗಳು ಉಳಿದುಕೊಂಡಿವೆ. ಅವುಗಳನ್ನು ತೆರವುಗೊಳಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದಿರುವ ವಟಾರೆ, ಮುಂದಿನ ತಿಂಗಳು 100-150 ಬಿಲ್‌ಗಳನ್ನು ತೆರವುಗೊಳಿಸುವ ಭರವಸೆ ಇದೆ ಎಂದು ಹೇಳಿದರು. 

SCROLL FOR NEXT