ರಾಜ್ಯ

ಕ್ಯಾಸಿನೋದಲ್ಲಿ 25 ಲಕ್ಷ ರೂ. ಗೆದಿದ್ದ ಟೀ ವ್ಯಾಪಾರಿ ಅಪಹರಿಸಿ, 15 ಲಕ್ಷ ರೂ. ಸುಲಿಗೆ: ರೌಡಿ ಸೇರಿ 8 ಮಂದಿ ಬಂಧನ

Manjula VN

ಬೆಂಗಳೂರು: ಗೋವಾದ ಕ್ಯಾಸಿನೊದಲ್ಲಿ 25 ಲಕ್ಷ ಹಣ ಗೆದ್ದಿದ್ದ ಟೀ ವ್ಯಾಪಾರಿ ವ್ಯಾಪಾರಿಯ ಅಪಹರಿಸಿ, 15 ಲಕ್ಷ ರೂಗಳನ್ನು ಸುಲಿಗೆ ಮಾಡಿದ್ದ ಎಂಟು ಆರೋಪಿಗಳನ್ನು ಹನುಮಂತನಗರ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಸ್ನೇಹಿತರೊಂದಿಗೆ ಗೋವಾ ಪ್ರವಾಸಕ್ಕೆ ಹೋಗಿದ್ದ ಟೀ ಮಾರಾಟಗಾರ ಟಿ.ಎಂ.ತಿಲಕ್ ಮಣಿಕಂಠ ಅವರು, ಅಲ್ಲಿನ ಕ್ಯಾಸಿನೋದಲ್ಲಿ ರೂ.25 ಲಕ್ಷ ಗೆದ್ದಿದ್ದರು. ಬಳಿಕ ನಗರಕ್ಕೆ ವಾಪಸ್ಸಾಗಿ ವಾಟ್ಸಾಪ್ ಸ್ಟೇಟಸ್ ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದರು.

ಈ ಮಾಹಿತಿ ತಿಳಿದ ಆರೋಪಿಗಳು ಮಣಿಕಂಠ ಅವರನ್ನು ಆ.5 ರಂದು ಅಪಹರಿಸಿ ಚಿತ್ರಹಿಂಸೆ ನೀಡಿ, ಸುಲಿಗೆ ಮಾಡಿದ್ದರು. ನಂತರ ನೆಲಮಂಗಲದ ರೆಸಾರ್ಟ್‌ನಲ್ಲಿ ಬಿಟ್ಟು ಪರಾರಿಯಾಗಿದ್ದರು. ಮರುದಿನ ಮಣಿಕಂಠ ಅವರು ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಘಟನೆ ಬಳಿಕ ತಮಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆಂಬ ವಿಚಾರ ತಿಳಿದ ಆರೋಪಿಗಳು, ನಗರದಿಂದ ಕಾಲ್ಕಿತ್ತಿದ್ದರು. ಗೋವಾಗೆ ತೆರಳಿ ಮುಂಬೈ ಮೂಲಕ ಶಿರಡಿಗೆ ತೆರಳಿದ್ದರು. ಈ ವಿಚಾರ ತಿಳಿದ ಪೊಲೀಸರು, ತಂಡ ರಚಿಸಿ ಆರೋಪಿಗಳನ್ನು ಶಿರಡಿಯಲ್ಲಿ ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ರೌಡಿ ಕಾರ್ತಿಕ್, ರಾಹುಲ್, ತರುಣ್, ಮನೋಜ್, ಈಶ್ವರ್, ರಾಮಕುಮಾರ್ ಅಲಿಯಾಸ್ ದೀಪು, ಮೋಹನ್ ಹಾಗೂ ನಿಶ್ಚಲ್ ಎಂದು ಗುರ್ತಿಸಲಾಗಿದ್ದು, ಆರೋಪಿಗಳಿಂದ ರೂ.10 ಲಕ್ಷವನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತ 8 ಮಂದಿಯ ಪೈಕಿ ಕಾರ್ತಿ ಹಾಗೂ ರಾಹುಲ್ ಬನಶಂಕರಿ ಪೊಲೀಸ್ ಠಾಣೆ ಮತ್ತು ವಿವಿ ಪುರಂ ಪೊಲೀಸ್ ಠಾಣೆಗಳಲ್ಲಿ ರೌಡಿ ಶೀಟರ್‌ಗಳಾಗಿದ್ದಾರೆ.

SCROLL FOR NEXT