ರಾಜ್ಯ

ಚಂದ್ರಯಾನ-3 ಯಶಸ್ಸಿಗಾಗಿ ರಾಜ್ಯದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಮಸೀದಿ, ಚರ್ಚ್ ಗಳಲ್ಲಿ ಪಾರ್ಥನೆ ಸಲ್ಲಿಕೆ

Manjula VN

ಬೆಂಗಳೂರು: ಭಾರತದ ಐತಿಹಾಸಿಕ ಕ್ಷಣ ಚಂದ್ರಯಾನ-3 ಯಶಸ್ಸಿಗೆ ಇನ್ನೊಂದೇ ಮೆಟ್ಟಿಲಷ್ಟೇ ಬಾಕಿಯಿದ್ದು.  ಇಸ್ರೋದ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಂದು ಸಂಜೆ ಲ್ಯಾಂಡ್ ಆಗಲಿದೆ. ಇದಕ್ಕಾಗಿ ಇಡೀ ವಿಶ್ವವೇ ಅದರ ಮೇಲೆ ದೃಷ್ಟಿ ನೆಟ್ಟಿದೆ. ಈ ನಡುವಲ್ಲೇ ಚಂದ್ರಯಾನ 3 ಯಶಸ್ವಿಯಾಗಲಿ ಎಂದು ರಾಜ್ಯದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದ್ದು, ಚರ್ಚ್ ಹಾಗೂ ಮಸೀದಿಗಳಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತಿದೆ.

ನಗರದ ಬಸವನಗುಡಿಯ ಶ್ರೀ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಾಮರಾಜಪೇಟೆ ಜನಪರ ವೇದಿಕೆಯ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. 18-ಅಡಿ ಗಣೇಶನ ಏಕಶಿಲಾ ವಿಗ್ರಹಕ್ಕೆ ಫಲ (ವಿವಿಧ ರೀತಿಯ ಹಣ್ಣುಗಳು), ಪಂಚಾಮೃತ (ಐದು ಪದಾರ್ಥಗಳಿಂದ ಮಾಡಲ್ಪಟ್ಟಿದೆ), ಅಭಿಷೇಕ (ಪವಿತ್ರ ಸ್ನಾನ) ಮತ್ತು ದೇವರ ನೆಚ್ಚಿನ ಸಿಹಿ ಕಡುಬುಗಳನ್ನು ನೀಡಿ, ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಗಣಪತಿಯ ಮೂರ್ತಿಯ ಸುತ್ತಲೂ ರಾಷ್ಟ್ರಧ್ವಜ, ಚಂದ್ರಯಾನ-3 ಮಿಷನ್ ಪೋಸ್ಟರ್‌ಗಳನ್ನು ಹಾಕಲಾಗಿತ್ತು.

ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡ್ ಆಗುವಂತೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗಿದೆ ಎಂದು ಸಂಘಟನೆಯ ಸದಸ್ಯರಾದ ಕೆ.ವಿ.ರಾಮಚಂದ್ರ ಅವರು ಹೇಳಿದರು.

ಇನ್ನು ಮೈಸೂರಿನಲ್ಲಿ, ಆಂಜನೇಯ ದೇವಸ್ಥಾನದಲ್ಲಿ ‘ಸರ್ವಾರ್ಥ ಸಿದ್ಧಿ ಯಾಗ’ವನ್ನು ನಡೆಸಲಾಗಿದೆ. ಸಾಮಾನ್ಯ ಜನರಷ್ಟೇ ಅಲ್ಲದೆ, ರಾಜಕಾರಣಿಗಳು ಕೂಡ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ.

ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಅವರು, ಪಕ್ಷದ 82 ಕಾರ್ಯಕರ್ತರೊಂದಿಗೆ ಮೈಸೂರಿನಿಂದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ಚಂದ್ರಯಾನ 3 ಯಶಸ್ವಿಯಾಗಲಿ ಎಂದು ಪೂಜೆ ಸಲ್ಲಿಸಿದರು.

ಕೋಲಾರದ ಕೋಲಾರಮ್ಮ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಸಂಸದ ಎಸ್.ಮುನಿಸ್ವಾಮಿ ಪೂಜೆ ಸಲ್ಲಿಸಿದರು. ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲೂ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ವಿಶೇಷ ಪೂಜೆಗಳ ಸಲ್ಲಿಸಲಾಯಿತು. ಈ ವೇಳೆ ಚಂದ್ರಯಾನದ ನೌಕೆಯ ರಂಗೋಲಿಯನ್ನು ಬಿಡಿಸಲಾಗಿತ್ತು. ಇದಲ್ಲದೆ, ರಾಜ್ಯದ ವಿವಿಧ ಚರ್ಚ್ ಗಳು ಹಾಗೂ ಮಸೀದಿಗಳಲ್ಲೂ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತಿದೆ.

SCROLL FOR NEXT