ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದ ಅಂಗಳದ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಯುವ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ನಗರದಲ್ಲಿರುವ ಜವಾಹರಲಾಲ್ ನೆಹರು ತಾರಾಲಯದಲ್ಲಿ ಬೃಹತ್ ಪರದೆ ಅಳವಡಿಸಲಾಗಿದೆ.
ವೀಕ್ಷಣೆ ವೇಳೆ ಕನ್ನಡದಲ್ಲಿಯೇ ತಜ್ಞರ ವಿವರಣೆ, ವಿಶ್ಲೇಷಣೆಗಳೊಂದಿಗೆ ಸಾರ್ವಜನಿಕರು ಈ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಬಹುದು.
ಇದನ್ನೂ ಓದಿ: ಚಂದ್ರಯಾನ-3 ಯಶಸ್ಸಿಗಾಗಿ ರಾಜ್ಯದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಮಸೀದಿ, ಚರ್ಚ್ ಗಳಲ್ಲಿ ಪಾರ್ಥನೆ ಸಲ್ಲಿಕೆ
ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಸಂಜೆ 5 ಗಂಟೆಗೆ ತಾರಾಲಯಕ್ಕೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್. ಎಸ್ ಬೋಸರಾಜು ಅವರೂ ಕೂಡ ಭೇಟಿ ನೀಡಲಿದ್ದು, ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲಿದ್ದಾರೆ.
ರಾಜ್ಯದ ಪ್ರಾದೇಶಿಕ ಹಾಗೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳಲ್ಲಿಯೂ ಪ್ರಸಾರಕ್ಕೆ ಸಿದ್ದತೆ:
ಈ ನಡುವೆ ರಾಜ್ಯದ ಪ್ರಾದೇಶಿಕ ಹಾಗೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳಲ್ಲಿಯೂ ಸಾರ್ವಜನಿಕರಿಗೆ ನೇರ ಪ್ರಸಾರಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸಚಿವ ಬೋಸರಾಜು ಅವರು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಚಂದ್ರನ ಅಂಗಳದಲ್ಲಿ ಇತಿಹಾಸ ಬರೆಯಲು ವಿಕ್ರಮ್ ಲ್ಯಾಂಡರ್ ಸನ್ನದ್ಧ: ಸಿಎಂ ಸಿದ್ದರಾಮಯ್ಯ ಸೇರಿ ಹಲವರಿಂದ ಶುಭ ಹಾರೈಕೆ
ಸಚಿವರ ಸೂಚನೆಯ ಅನ್ವಯ ಮಂಗಳೂರಿನ ಪಿಲಿಕುಳ ವಿಜ್ಞಾನ ಕೇಂದ್ರ ಹಾಗೂ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಇನ್ನುಳಿದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳಲ್ಲೂ ನೇರಪ್ರಸಾರದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.