ರಾಜ್ಯ

ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ ಪ್ರಶ್ನಿಸಿದ ಮಾಜಿ ಕಾರ್ಪೋರೇಟರ್ ಗಳು!

Nagaraja AB

ಬೆಂಗಳೂರು: ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ 198 ರಿಂದ 225 ವಾರ್ಡ್‌ಗಳ ಪುನರ್ ವಿಂಗಡಣೆ ಕರಡು ಬಿಜೆಪಿ ಮತ್ತು ಕಾಂಗ್ರೆಸ್‌ನ ಮಾಜಿ ಕಾರ್ಪೊರೇಟರ್‌ಗಳಿಗೆ ತೃಪ್ತಿ ತಂದಿಲ್ಲ. 2024ರ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಶೀಘ್ರದಲ್ಲಿಯೇ ಕಾರ್ಪೋರೇಷನ್ ಚುನಾವಣೆ ನಡೆದರೂ ಆಶ್ಚರ್ಯಪಡಬೇಕಾಗಿಲ್ಲ ಎಂದಿದ್ದಾರೆ. 

ವಾರ್ಡ್ ಪುನರ್ ವಿಂಗಡಣೆ ಹಳೆಯ ಬೆಂಗಳೂರು ವ್ಯಾಪ್ತಿಯ 100 ವಾರ್ಡ್‌ಗಳ ಹೆಚ್ಚು ಪರಿಣಾಮ ಬೀರುವುದಿಲ್ಲ, ಆದರೆ ನಗರದ ಹೊರವಲಯದಲ್ಲಿರುವ ಬಹುಮಹಡಿ ಕಟ್ಟಡಗಳು ಮತ್ತು ವಿಸ್ತರಣೆ ನಡೆಯತ್ತಿರುವ ಕಡೆ ಪರಿಣಾಮ ಬೀರುತ್ತದೆ ಎಂದು ಮಾಜಿ ಕಾರ್ಪೋರೇಟರ್ ಹೇಳಿದ್ದಾರೆ.  

ವಿಂಗಡಣೆಯಿಂದ  ವಾರ್ಡ್ ಗಡಿಯಲ್ಲಿ ಸ್ವಲ್ಪ ಬದಲಾವಣೆಗಳಾಗಿವೆ ಎಂದು ಪಕ್ಷದ ನನ್ನ ಸಹ ಕಾರ್ಪೊರೇಟರ್‌ಗಳು ಹೇಳುತ್ತಾರೆ. ಆದರೆ ನನ್ನ ವಾರ್ಡ್‌ನ ವಿಷಯದಲ್ಲಿ ಭಾರಿ ವ್ಯತ್ಯಾಸವಿದೆ. ಹೊಸ ಸಮೀಕ್ಷೆಯ ನಕ್ಷೆಯಂತೆ ದೊಡ್ಡ ಅಪಾರ್ಟ್‌ಮೆಂಟ್‌ ಸಮುಚ್ಚಯವನ್ನೂ ಎರಡು ವಾರ್ಡ್‌ಗಳಾಗಿ ವಿಂಗಡಿಸಲಾಗಿದೆ. ಅಂತಹ ವಿಭಜನೆಯು ಇನ್ನಷ್ಟು ಗೊಂದಲವನ್ನು ಸೃಷ್ಟಿಸುತ್ತದೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಕಾರ್ಪೋರೇಟರ್ ಒಬ್ಬರು ಹೇಳುತ್ತಾರೆ. 

ಈ ಸಮಸ್ಯೆಯನ್ನು ಪರಿಹರಿಸಲು ಮಾಜಿ ಕಾರ್ಪೊರೇಟರ್‌ಗಳು ಮತ್ತು ಪಕ್ಷದ ಕಾರ್ಯಕರ್ತರು ನಾಗರಿಕರ ಪರವಾಗಿ ಕ್ಷೇತ್ರದ ಪರ ಕಸರತ್ತು  ನಡೆಸುತ್ತಿದ್ದಾರೆ. ವಿಧಾನಸೌಧದಲ್ಲಿರುವ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಚೇರಿಯಲ್ಲಿ ದೂರುಗಳನ್ನು ಸಲ್ಲಿಸುವಾಗ ಅಥವಾ ಅವರ ಸಲಹೆಗಳನ್ನು ಪಟ್ಟಿ ಮಾಡುವಾಗ ಅಗತ್ಯ ದಾಖಲೆಗಳೊಂದಿಗೆ ನಿವಾಸಿಗಳಿಗೆ ಸಹಾಯ ಮಾಡುತ್ತಿದ್ದಾರೆ.

ವಿಂಗಡಣೆ ಕುರಿತಂತೆ ಮಾತನಾಡಿದ ಬಿಜೆಪಿಯ ಮಾಜಿ ಕಾರ್ಪೊರೇಟರ್ ಒಬ್ಬರು, 2011 ರ ಜನಗಣತಿ ವರದಿಯ ಪ್ರಕಾರ ವಿಭಜನೆಯನ್ನು ಮಾಡಲಾಗಿದೆಯೇ ಹೊರತು 2023 ರ ಜನಗಣತಿ ವರದಿಯಲ್ಲ. ಆದ್ದರಿಂದ ದೊಡ್ಡ ಅಸಮತೋಲನ ಉಂಟಾಗಿದೆ. ಪ್ರತಿ ವಾರ್ಡ್‌ನಲ್ಲಿ 40,000 ಜನಸಂಖ್ಯೆ ಎಂಬ ಸರ್ಕಾರದ ಲೆಕ್ಕಾಚಾರವನ್ನು ಅನುಸರಿಸಿದರೆ, 500 ಕ್ಕೂ ಹೆಚ್ಚು ವಾರ್ಡ್‌ಗಳು ಬೇಕಾಗುತ್ತವೆ. ವಿಭಜನೆ ಆಧಾರ ಸರಿಯಾಗಿಲ್ಲ, ಇನ್ನಷ್ಟು ಗೊಂದಲವನ್ನು ಸೃಷ್ಟಿಸುತ್ತದೆ ಎಂದರು. 

ಆಕ್ಷೇಪಣೆಗಳನ್ನು ಸ್ವೀಕರಿಸಲಾಗುತ್ತಿದೆ. ಆದರೆ ಸರ್ಕಾರ ಕೈಬರಹ ಮತ್ತು ಭೌತಿಕ ಸಲ್ಲಿಕೆಗೆ ಸೂಚಿಸಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಕ್ಷೇಪಣೆ ಬರುತ್ತಿಲ್ಲ.  ಅರ್ಜಿಗಳ ಮೌಲ್ಯಮಾಪನ ಇನ್ನಷ್ಟೇ ಆರಂಭವಾಗಬೇಕಿದೆ  ಎಂದು ಯುಡಿಡಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT