ಕಲಬುರಗಿ: ಮುಂಬೈ-ಸೊಲ್ಲಾಪುರ ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಕಲಬುರಗಿವರೆಗೆ ವಿಸ್ತರಿಸಬೇಕು ಎಂದು ಕಲಬುರಗಿ ಸಂಸದ ಡಾ.ಉಮೇಶ ಜಾಧವ್ ಅವರು ಸೋಮವಾರ ಒತ್ತಾಯಿಸಿದ್ದಾರೆ.
ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಲೋಕಸಭೆಯಲ್ಲಿ ಮೊದಲ ದಿನವೇ ವಿಷಯ ಪ್ರಸ್ತಾಪಿಸಿದ ಡಾ.ಜಾಧವ್ ಅವರು, ಮುಂಬೈ-ಸೊಲ್ಲಾಪುರ ನಡುವಿನ ಒಂದೇ ಭಾರತ ರೈಲನ್ನು ಕಲಬುರಗಿಗೆ ವಿಸ್ತರಿಸಬೇಕು. ಅದನ್ನು ಮುಂಬೈ-ಸೋಲಾಪುರ-ಕಲಬುರಗಿ ನಡುವೆ ಓಡಿಸಬೇಕು ಎಂದರು,
ಇದನ್ನು ಓದಿ: ಬೆಂಗಳೂರು-ಧಾರವಾಡ 'ವಂದೇ ಭಾರತ್ ಎಕ್ಸ್ಪ್ರೆಸ್ ರೈಲು' ಸೇವೆ ಬೆಳಗಾವಿಯವರೆಗೆ ವಿಸ್ತರಣೆ, ರೈಲ್ವೆ ಸಚಿವಾಲಯ ಆದೇಶ
ಕಲಬುರಗಿ ಕಲ್ಯಾಣ ಕರ್ನಾಟಕ ಪ್ರದೇಶದ 6 ಜಿಲ್ಲೆಗಳ ವಲಯ ಕೇಂದ್ರವಾಗಿದೆ ಎಂದು ಸ್ಪೀಕರ್ ಗಮನಕ್ಕೆ ತಂದರು. ಮುಂಬೈಗೆ ಪ್ರತಿದಿನ 10,000 ಕ್ಕೂ ಹೆಚ್ಚು ಜನರು ಪ್ರಯಾಣಿಸುವುದರಿಂದ ವಂದೇ ಭಾರತ್ ರೈಲನ್ನು ಕಲಬುರಗಿಯವರೆಗೆ ವಿಸ್ತರಿಸಿದರೆ ಈ ಪ್ರದೇಶದ ಆರ್ಥಿಕತೆಗೆ ಉತ್ತೇಜನ ದೊರೆಯಲಿದೆ ಎಂದು ಡಾ ಜಾಧವ್ ಒತ್ತಾಯಿಸಿದರು.
ಕಲಬುರಗಿ ಕರ್ನಾಟಕದ 4ನೇ ದೊಡ್ಡ ನಗರವಾಗಿದ್ದರೂ ಕಲಬುರಗಿಯಿಂದ ಬೆಂಗಳೂರಿಗೆ ಮೀಸಲಾದ ಯಾವುದೇ ರೈಲು ಇಲ್ಲ ಎಂದು ಸದನಕ್ಕೆ ತಿಳಿಸಿದರು. ಕಲಬುರಗಿಯಿಂದ ಬೆಂಗಳೂರಿಗೆ ಅತಿ ಹೆಚಿನ ಸಂಖ್ಯೆಯಲ್ಲಿ ಜನ ಪ್ರಯಾಣಿಸುತ್ತಾರೆ. ಅಸ್ತಿತ್ವದಲ್ಲಿರುವ ಎಲ್ಲಾ ರೈಲುಗಳು ಯಾವಾಗಲೂ ತುಂಬಿರುತ್ತವೆ ಮತ್ತು ಸಾಮಾನ್ಯ ಜನರಿಗೆ ದೃಢೀಕೃತ ಬರ್ತ್ಗಳನ್ನು ಪಡೆಯಲು ಕಷ್ಟವಾಗುತ್ತದೆ ಎಂದರು.