ಬೆಳಗಾವಿ: ಮುಂದಿನ ವಾರ್ಷಿಕ ಬಜೆಟ್ ನಲ್ಲಿ ರಾಜ್ಯದಲ್ಲಿರುವ ಜಿಲ್ಲಾ ನ್ಯಾಯಾಲಯ ಹಾಗೂ ತಾಲ್ಲೂಕು ನ್ಯಾಯಾಲಯಗಳಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿಂದು ಜೆಡಿಎಸ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಸಕ್ತ ಸಾಲಿಗೆ ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳಲಾಗಿರುವ ಒಟ್ಟಾರೆ 623.96 ಕೋಟಿ ಮೊತ್ತದ ನ್ಯಾಯಾಲಯ ಕಟ್ಟಡ ಹಾಗೂ ನ್ಯಾಯಾಂಗ ಅಧಿಕಾರಿಗಳ ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಪ್ರಜೆಗಳ ಪತ್ತೆ, ಗಡಿಪಾರು- ವಿಧಾನಪರಿಷತ್ತಿನಲ್ಲಿ ಡಾ.ಜಿ. ಪರಮೇಶ್ವರ್
ಅದೇ ರೀತಿ, ನ್ಯಾಯಾಲಯ ಕಟ್ಟಡ ಹಾಗೂ ವಸತಿ ಗೃಹಗಳ ನಿರ್ವಹಣೆ ಕಾಮಗಾರಿಗಳನ್ನು ಸಹ ಲೋಕೋಪಯೋಗಿ ಇಲಾಖೆಗೆ ಕಟ್ಟಡಗಳ ನಿರ್ವಹಣೆದರಡಿ ಒದಗಿಸಿದ ಅನುದಾನದಲ್ಲಿ ಕೈಗೆತ್ತಿಕೊಂಡು ಸುಸ್ಥಿತಿಯಲ್ಲಿಡಲು ಸಹ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಭೋಜೇಗೌಡ, ರಾಜ್ಯ ಸರ್ಕಾರ ಹೈಕೋರ್ಟ್ ಗಳಿಗೆ ಸ್ಪಂದಿಸುವ ವೇಗದಲ್ಲಿ ಒಂದಿಷ್ಟು ಒಲವು ಕೆಳಮಟ್ಟದ ನ್ಯಾಯಾಲಯಗಳಿಗೂ ನೀಡಲಿದೆ.ಅಲ್ಲಿ ದುಡಿಯುವ ವರ್ಗ, ರೈತರೇ ಹೆಚ್ಚಾಗಿ ಬರುತ್ತಾರೆ ಮೂಲ ಸೌಕರ್ಯಗಳಿಗೆ ಒತ್ತು ನೀಡಿ. ಇನ್ನೊಂದೆಡೆ ಬಾರ್ ಕೌನ್ಸಿಲ್ ಜಿಲ್ಲಾ, ತಾಲ್ಲೂಕು ಕಚೇರಿಗಳ ಬಳಿ ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸದನದ ಗಮನ ಸೆಳೆದರು.