ಬೆಂಗಳೂರು: ನಗರದಲ್ಲಿ ಫ್ಲೆಕ್ಸ್ಗಳು ಮತ್ತು ಬ್ಯಾನರ್ಗಳ ಹಾವಳಿ ಅವ್ಯಾಹತವಾಗಿ ಮುಂದುವರೆದಿವೆ. ಅನಧಿಕೃತ ಫ್ಲೆಕ್ಸ್, ಬ್ಯಾನರ್'ಗಳಿಗೆ ಬಿಬಿಎಂಪಿ ನಿಷೇಧ ಹೇರಿದ್ದರೂ ಕೆಆರ್ ಪುರಂನಲ್ಲಿ ಇದರ ಹಾವಳಿ ಹೆಚ್ಚಾಗಿದೆ.
ಕೆಆರ್ ಪುರಂ ವಿಧಾನಸಭೆಯಿಂದ ಸ್ಥಳೀಯ ಮುಖಂಡರಾದ ಜಗನ್ನಾಥ್ ಮತ್ತು ಡಿಜಿ ಶಿವಕುಮಾರ್ ಅವರು ಬಸವನಪುರ ವಾರ್ಡ್ ಮತ್ತು ಸುತ್ತಮುತ್ತ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಜಯಪ್ರಕಾಶ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಬೃಹತ್ ಕಟೌಟ್ ಗಳನ್ನು ಹಾಕಿದ್ದಾರೆ. ಈ ಸಂಬಂಧ ಸ್ಥಳೀಯ ಕಾರ್ಯಕರ್ತರು ಹಾಗೂ ನಿವಾಸಿಗಳು ಮಹದೇವಪುರ ವಲಯದ ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಅನಧಿಕೃತ ಹೋರ್ಡಿಂಗ್ ಅಳವಡಿಕೆ ಪ್ರಕರಣ: ಪಾಲಿಕೆಯೇ ಬೆಂಗಳೂರಿಗೆ ನಂ.1 ಶತ್ರು; ಬಿಬಿಎಂಪಿಗೆ ಹೈಕೋರ್ಟ್ ಚಾಟಿ
ಮಹದೇವಪುರ ವಲಯದ ಜಂಟಿ ಆಯುಕ್ತೆ ದಾಕ್ಷಾಯಿಣಿ ಮಾತನಾಡಿ, ಫ್ಲೆಕ್ಸ್ಗಳನ್ನು ತೆಗೆಯುವಂತೆ ಸಂಬಂಧಪಟ್ಟ ವಾರ್ಡ್ ಎಂಜಿನಿಯರ್ಗಳಿಗೆ ಸೂಚಿಸಿದ್ದೇನೆಂದು ಹೇಳಿದ್ದಾರೆ.
ಎಫ್ಐಆರ್ಗಳು ಅಥವಾ ದಂಡದ ಕುರಿತ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಸಹಾಯಕ ಕಂದಾಯ ಅಧಿಕಾರಿಗಳಿಗೆ ಮಾತ್ರ ಮಾಹಿತಿ ತಿಳಿದಿರುತ್ತದೆ ಎಂದು ತಿಳಿಸಿದರು.
ಈ ಹಿಂದೆ ಮೇ ತಿಂಗಳಲ್ಲಿ ಕ್ವೀನ್ಸ್ ರಸ್ತೆಯಲ್ಲಿ ಕಾಂಗ್ರೆಸ್ ಪಕ್ಷದ ಫ್ಲೆಕ್ಸ್ ಹಾಕಿದಾಗ ಬಿಬಿಎಂಪಿ 50,000 ರೂಪಾಯಿ ದಂಡ ವಿಧಿಸಿತ್ತು. ಈ ದಂಡದ ಮೊತ್ತವನ್ನು ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪಾವತಿಸಿದ್ದರು.