ರಾಜ್ಯ

ವೈಭವಯುತವಾಗಿದ್ದ ಪುರಾತನ ಕೊಂಡಜ್ಜಿ ವರದರಾಜಸ್ವಾಮಿ ದೇವಾಲಯ ಜೀರ್ಣೋದ್ಧಾರವಾಗದೇ ಅನಾಥ!

Shilpa D

ಹಾಸನ: ಶಿಲ್ಪಕಲೆಗಳ ತವರೂರು ಎಂದೇ ಕರೆಸಿಕೊಳ್ಳುವ ಹಾಸನ ಜಿಲ್ಲೆಯಲ್ಲಿ ರಾಜ್ಯ ಪುರಾತತ್ವ ಇಲಾಖೆ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಹಾಸನ ಸಮೀಪದ ಕೊಂಡಜ್ಜಿ ಗ್ರಾಮದ 900 ವರ್ಷಗಳ ಪುರಾತನ ಹೊಯ್ಸಳ ವಂಶದ ವರದರಾಜಸ್ವಾಮಿ ದೇವಸ್ಥಾನ ಹಾಳಾಗುತ್ತಿದ್ದು ಜೀರ್ಣೋದ್ಧಾರದ ಅವಶ್ಯಕತೆ ಇದೆ.

ದಶಕಗಳಿಂದ ದಯನೀಯ ಸ್ಥಿತಿಯಲ್ಲಿದ್ದ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವಲ್ಲಿ ಮುಜರಾಯಿ ಇಲಾಖೆ ಮತ್ತು ಸ್ಥಳೀಯ ಅಧಿಕಾರಿಗಳು ವಿಫಲರಾಗಿದ್ದಾರೆ.

ಬೇಲೂರು ದೇವಾಲಯದಲ್ಲಿರಬೇಕಾಗಿದ್ದ ಶ್ರೀ ವರದ ರಾಜಸ್ವಾಮಿಯ ಅದ್ಭುತ ಶಿಲ್ಪಕಲಾ ವೈಭವದ ಮೂರ್ತಿಯು ಕೊಂಡಜ್ಜಿ ದೇವಾಲಯದಲ್ಲಿದೆ. ಅಪರೂಪದ ಕಪ್ಪು ಕಲ್ಲಿನಿಂದ ಕೆತ್ತಿದ 17 ಅಡಿ ಎತ್ತರದ ಮತ್ತು ಏಕಶಿಲೆಯ ವಿಗ್ರಹಕ್ಕೆ ಹೆಸರುವಾಸಿಯಾದ ಈ ದೇವಾಲಯವು ರಾಜ್ಯದಾದ್ಯಂತ ಅನೇಕ ಭಕ್ತರನ್ನು ಹಾಗೂ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಗರುಡ ವಾಹನ, ಪದ್ಮಾಸನದ ಮೇಲೆ ಶಂಕ, ಚಕ್ರ ಗದಾಧಾರಿ ಕೃಷ್ಣ ಶಿಲೆಯ ವರದರಾಜಸ್ವಾಮಿ ಮೂರ್ತಿಯಿಂದ ಈ ದೇವಸ್ಥಾನ ಹೆಚ್ಚಿನ ಖ್ಯಾತಿ ಪಡೆದಿದೆ. ಆದರೆ ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯದ ಪುನರ್‌ ನಿರ್ಮಾಣಕ್ಕೆ ಕೈ ಹಾಕಿದವರು ಅರ್ಧಕ್ಕೆ ಬಿಟ್ಟಿರುವುದರಿಂದ ದೇವಾಲಯ ಅನಾಥ ಸ್ಥಿತಿಯಲ್ಲಿದೆ.

ಈವರೆಗೆ 25 ಲಕ್ಷ ರೂಪಾಯಿ ವೆಚ್ಚ ಮಾಡಿ ನವೀಕರಣ ಮಾಡಿದ್ದರೂ ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಈ ಹಿಂದೆ ನೀಡಿದ ಭರವಸೆಯಂತೆ ನಿಗದಿತ ಸಮಯಕ್ಕೆ ದೇಗುಲವನ್ನು ಪೂರ್ಣಗೊಳಿಸದ ಚುನಾಯಿತ ಪ್ರತಿನಿಧಿಗಳಿಗೆ ಪ್ರವಾಸಿಗರು ಹಿಡಿಶಾಪ ಹಾಕುತ್ತಿದ್ದಾರೆ. ಮುಂದಿನ ಪೀಳಿಗೆಗೆ ದೇವಾಲಯವನ್ನು ಸಂರಕ್ಷಿಸಬೇಕೆಂದು ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಪುರಾಣಗಳ ಪ್ರಕಾರ, ಬೇಲೂರಿನ ಚನ್ನಕೇಶವ ದೇವಾಲಯದ ನಿರ್ಮಾಣದ ಸಮಯದಲ್ಲಿ ವರದರಾಜಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕಾಗಿತ್ತು. ಹೊಯ್ಸಳ ರಾಜರು ಮತ್ತು ಶಿಲ್ಪಿಗಳು ಬೇಲೂರು ದೇವಸ್ಥಾನದಲ್ಲಿ ವರದರಾಜಸ್ವಾಮಿ ವಿಗ್ರಹವನ್ನು ಎತ್ತರದ ಕಾರಣದಿಂದ ಸ್ಥಾಪಿಸಲು ನಿರಾಕರಿಸಿದ್ದರು. ಅಂತಿಮವಾಗಿ, ಆಗಿನ ಹೊಯ್ಸಳ ರಾಜನು ಕೊಂಡಜ್ಜಿ ಗ್ರಾಮದಲ್ಲಿ ವಿಗ್ರಹವನ್ನು ಸ್ಥಾಪಿಸಲು ನಿರ್ಧರಿಸಿದನು.

ದೇವಾಲಯವನ್ನು ಅಧಿಕಾರಿಗಳು ನಿರ್ಲಕ್ಷಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಇತಿಹಾಸಕಾರ ಮತ್ತು ನಿವೃತ್ತ ಸರ್ಕಾರಿ ಅಧಿಕಾರಿ ರಂಗನಾಥ್, ಅಪರೂಪದ ಕಲ್ಲಿನಿಂದ ಕೆತ್ತಲಾದ ಅತ್ಯಂತ ಅಪರೂಪದ ಎತ್ತರದ ವಿಗ್ರಹವನ್ನು ರಕ್ಷಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.

SCROLL FOR NEXT