ರಾಜ್ಯ

ಸಂಸತ್ ಭದ್ರತಾ ಲೋಪ: ದೆಹಲಿ ಪೊಲೀಸರಿಂದ ಮನೋರಂಜನ್ ಕುಟುಂಬದ ವಿಚಾರಣೆ

Nagaraja AB

ಮೈಸೂರು:  ಸಂಸತ್ ಭದ್ರತಾ ಲೋಪ ಪ್ರಕರಣದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಮತ್ತು ಗುಪ್ತಚರ ದಳದ ನಾಲ್ವರು ಅಧಿಕಾರಿಗಳ ತಂಡ ಸೋಮವಾರ ಮೈಸೂರಿನ ಮನೋರಂಜನ್ ಅವರ ಮನೆಯಲ್ಲಿ ಸುಮಾರು ಏಳು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದೆ.

ಸೋಮವಾರ ಬೆಳ್ಳಿಗೆ 11 ಗಂಟೆ ಸುಮಾರಿಗೆ ಮನೋರಂಜನ್ ಮನೆಗೆ ಆಗಮಿಸಿದ ಪೊಲೀಸರು ವಿಜಯನಗರದಲ್ಲಿರುವ ಆತನ ತಾಯಿ ಶೈಜಲಾ ಮತ್ತು ತಂದೆ ದೇವರಾಜಗೌಡ ಅವರನ್ನು ತೀವ್ರವಾಗಿ ವಿಚಾರಣೆ ನಡೆಸಿದ್ದಾರೆ. 

ಎರಡನೇ ಮಹಡಿಯಲ್ಲಿದ್ದ ಮನೋರಂಜನ್ ಅವರ ಕೊಠಡಿಯನ್ನು ತೆರೆದಾಗ ಪುಸ್ತಕಗಳು ಮತ್ತು ಇತರ ವಸ್ತುಗಳ ಸಂಗ್ರಹವನ್ನು ನೋಡಿದ್ದಾರೆ. ಅವರ ತಂದೆ ದೇವರಾಜಗೌಡ ಅವರನ್ನು ಒಂದು ಗಂಟೆಗೂ ಹೆಚ್ಚು ಕಾಲ ಪ್ರತ್ಯೇಕವಾಗಿ ಮತ್ತು ಕುಟುಂಬ ಸದಸ್ಯರೊಂದಿಗೂ ವಿಚಾರಣೆ ನಡೆಸಿದ್ದಾರೆ.

ಮನೋರಂಜನ್ ಅವರ ದಿನಚರಿ, ಚಲನವಲನಗಳು, ಸ್ನೇಹಿತರು ಮತ್ತು ಬೆಂಗಳೂರು ಮತ್ತು ಇತರ ನಗರಗಳಿಗೆ ಇತ್ತೀಚಿನ ಭೇಟಿಗಳ ಮೇಲೆ ಮಾಹಿತಿ ಕಲೆ ಹಾಕಿದ್ದಾರೆ. ಅವರ ಮನೆಗೆ ಸಾಗರ್ ಶರ್ಮಾ ಅವರ ಭೇಟಿ ಮತ್ತು ಆತನ ಪಾಕೆಟ್ ಮನಿ ಬಗ್ಗೆ ವಿಚಾರಿಸಿದ್ದಾರೆ. 

ಸಂಸತ್ ಭವನ ಪ್ರವೇಶಿಸಲು ಯಶಸ್ವಿಯಾದ ಆರೋಪಿಗಳಲ್ಲಿ ಮನೋರಂಜನ್ ಒಬ್ಬರಾಗಿದ್ದು, ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ವಿಜಯನಗರ ಪೊಲೀಸರು ದೆಹಲಿಯಿಂದ ತನಿಖಾ ತಂಡಕ್ಕೆ ನೆರವು ನೀಡುತ್ತಿದ್ದಾರೆ.

SCROLL FOR NEXT