ರಾಜ್ಯ

ಕೋಲಾರದಲ್ಲಿ ಮರ್ಯಾದಾ ಹತ್ಯೆ: ಹೆತ್ತ ಮಗಳನ್ನು ಹತ್ಯೆ ಮಾಡಿ ಸುಟ್ಟು ಹಾಕಿದ ಅಪ್ಪ!

Lingaraj Badiger

ಕೋಲಾರ: ಮದುವೆಯಾದರೂ ತಾನು ಪ್ರೀತಿಸುತ್ತಿದ್ದ ಹುಡುಗನೇ ಬೇಕು ಎಂದು ಹಠ ಇಡಿದಿದ್ದ 17 ವರ್ಷದ ಮಗಳನ್ನು ತವರು ಮನೆಗೆ ಕರೆದುಕೊಂಡಿದ್ದ ಬಂದಿದ್ದ ತಂದೆಯೇ ಮಾರಾಕಾಸ್ತ್ರಗಳಿಂದ ಕೊಲೆ ಮಾಡಿ, ಸುಟ್ಟು ಹಾಕಿರುವ ಅಮಾನವೀಯ ಘಟನೆ ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ನಂಗಲಿ ಪೊಲೀಸ್ ವ್ಯಾಪ್ತಿಯ ಮುಸ್ಟೂರು ಗ್ರಾಮದಲ್ಲಿ ನಡೆದಿದೆ.

ಹೆತ್ತ ಮಗಳನ್ನು ಹತ್ಯೆ ಮಾಡಿದ್ದ ಮುಸ್ಟೂರು ಗ್ರಾಮದ ರವಿ(54) ಮೇ 22 ರಂದು ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ನಂಗಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಮೇರೆಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದಾಗ ಮರ್ಯಾದಾ ಹತ್ಯೆ ಹೊರ ಬಿದ್ದಿದೆ ಎಂದು ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಅವರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿ ಸಂಗ್ರಹಿಸಲು ಸಬ್‌ಇನ್ಸ್‌ಪೆಕ್ಟರ್ ಮತ್ತು ಸಂಬಂಧಪಟ್ಟ ಬೀಟ್ ಪೊಲೀಸರಿಗೆ ಸೂಚಿಸಿದ್ದೆ. ಸಂತ್ರಸ್ತೆಯ ತಂದೆ ಪೊಲೀಸರಿಗೆ ಸ್ಪಷ್ಟ ಚಿತ್ರಣ ನೀಡದಿರುವ ಬಗ್ಗೆ ಬೀಟ್ ಕಾನ್‌ಸ್ಟೆಬಲ್ ರವಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಹತ್ತು ದಿನಗಳ ಹಿಂದೆ ಗ್ರಾಮದ ಅನಾಮಧೇಯ ವ್ಯಕ್ತಿಯೊಬ್ಬರಿಂದ ಅವರ ಕಚೇರಿಗೆ ಪತ್ರ ಬಂದಿದೆ.

ತಕ್ಷಣ ಪೊಲೀಸರು ಸಂತ್ರಸ್ತೆಯ ತಂದೆ ರವಿಯನ್ನು ವಿಚಾರಣೆಗೆ ಒಳಪಡಿಸಿದಾಗ ಪಿಯುಸಿ ಓದುತ್ತಿದ್ದ ಹದಿನೇಳು ವರ್ಷದ ಮಗಳು ತನ್ನ ಸೋದರ ಸಂಬಂಧಿ ಕಲ್ಯಾಣ್ ಕುಮಾರ್‌ನನ್ನು ಪ್ರೀತಿಸುತ್ತಿದ್ದಳು. ಇದನ್ನು ವಿರೋಧಿಸಿದ ರವಿ ಕೂಡಲೇ ಬೇರೊಬ್ಬನ ಜೊತೆ ಮಗಳ ಮದುವೆ ಮಾಡಿದ್ದಾರೆ.

ಆದರೆ ಮದುವೆ ನಂತರವೂ ಯುವತಿ ತನ್ನ ಪ್ರಿಯಕರನೊಂದಿಗೆ ಸಂಪರ್ಕದಲ್ಲಿರುವುದು ಪತಿ, ಸುಬ್ರಮಣಿ ಅವರಿಗೆ ಗೊತ್ತಾಗಿದೆ. ಅದನ್ನು ಸುಬ್ರಮಣಿ ಪ್ರಶ್ನಿಸಿದ್ದಾರೆ ಮತ್ತು ತಮ್ಮ ಮಗಳನ್ನು ವಾಪಸ್ ಕರೆದುಕೊಂಡು ಹೋಗುವಂತೆ ತಂದೆ ರವಿಗೆ ತಿಳಿಸಿದ್ದಾರೆ.

ನಂತರ ವೆಮಗಲ್‌ಗೆ ತೆರಳಿದ ರವಿ ಆಕೆಯನ್ನು ಗ್ರಾಮಕ್ಕೆ ಕರೆತಂದು ಗ್ರಾಮದ ಹೊರವಲಯದಲ್ಲಿರುವ ತನ್ನ ಜಮೀನಿಗೆ ಕರೆದೊಯ್ದು, ಕೊಲೆ ಮಾಡಿ ಸುಟ್ಟು ಹಾಕಿದ್ದಾನೆ. ಬಳಿಕ ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ರವಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಮರ್ಯಾದೆಗೆ ಹೆದರಿ ಮಗಳನ್ನು ಕೊಲ್ಲುವ ನಿರ್ಧಾರ ಕೈಗೊಂಡಿರುವುದಾಗಿ ವಿಚಾರಣೆ ವೇಳೆ ರವಿ ಒಪ್ಪಿಕೊಂಡಿದ್ದಾನೆ.

ಇನ್ನು ಸುಬ್ರಮಣಿಯೊಂದಿಗೆ ಬಾಲ್ಯವಿವಾಹವಾಗಿದ್ದು, ಪೊಲೀಸರು ಎಲ್ಲಾ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ ಮತ್ತು ಈ ಸಂಬಂಧ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ನಾರಾಯಣ್ ಅವರು ತಿಳಿಸಿದ್ದಾರೆ.

SCROLL FOR NEXT