ರಾಜ್ಯ

ಸಿಎಸ್‌ಆರ್‌ ನಿಧಿ ಬಳಸಿ ಸರ್ಕಾರಿ ಆರೋಗ್ಯ ಕೇಂದ್ರಗಳ ಮೇಲ್ದರ್ಜೆಗೆ!

Manjula VN

ಬೆಂಗಳೂರು: ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಅಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು ಸಿಎಸ್‌ಆರ್‌ ಬಾಕ್ಸ್ ಸಂಸ್ಥೆಯ ಜೊತೆಗೆ ಆರೋಗ್ಯ ಇಲಾಖೆ ಒಪ್ಪಂದ ಮಾಡಿಕೊಂಡಿದೆ.

ನಗರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಮ್ಮುಖದಲ್ಲಿ ಒಪ್ಪಂದ ಪ್ರಕ್ರಿಯೆ ನಡೆಯಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ‘ಸಿಎಸ್‌ಆರ್ ಬಾಕ್ಸ್ ಸಂಸ್ಥೆಯು ಈಗಾಗಲೇ ರೂ.3 ಕೋಟಿ ಸಿಎಸ್‌ಆರ್ ಅನುದಾನದಲ್ಲಿ ರಾಯಚೂರು ಜಿಲ್ಲೆಯ 10 ಸರ್ಕಾರಿ ಆರೋಗ್ಯ ಕೇಂದ್ರಗಳ ಮೂಲಸೌಕರ್ಯ ವೃದ್ಧಿಗೆ ನೆರವಾಗಿದ್ದು, ಈ ಕಾರ್ಯ ಪ್ರಗತಿಯಲ್ಲಿದೆ. ಗುಂಜಹಳ್ಳಿ, ಉಡ್ಮಗಲ, ಗಿಲ್ಲಸುಗೂರು, ಬಳಗನೂರು, ಬಲ್ಲಟಗಿ, ಗಬ್ಬೂರು, ಮಸರ್ಕಲ್, ಕೊಪ್ಪಾರ, ಗಳಗ ಹಾಗೂ ರಾಮದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ’ ಎಂದು ಹೇಳಿದರು.

ನೂತನ ಒಪ್ಪಂದದ ಅನುಸಾರ ಸಂಸ್ಥೆಯು ಸಿಎಸ್‌ಆರ್ ಅಡಿ ರೂ.100 ಕೋಟಿಯಲ್ಲಿ 200 ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಮೂಲಸೌಕರ್ಯ ಒದಗಿಸುತ್ತದೆ. ಇದರಿಂದ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಸಿಗಲಿದೆ ಎಂದು ತಿಳಿಸಿದರು.

ಸಿಎಸ್‌ಆರ್ ನಿಧಿಯನ್ನು ಸಮರ್ಪಕವಾಗಿ ಬಳಸಲು, ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು ಹಾಗೂ ಖಾಸಗಿ ಕಂಪನಿಗಳ ಜತೆಗೆ ಬಾಂಧವ್ಯ ವೃದ್ಧಿಸಲು ಇಲಾಖೆಯ ಉಪನಿರ್ದೇಶಕರೊಬ್ಬರನ್ನು ರಾಜ್ಯಮಟ್ಟದ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಇದರಿಂದ ಸಿಎಸ್‌ಆರ್ ಅನುದಾನ ಸದ್ಬಳಕೆ ಆಗುವ ವಿಶ್ವಾಸವಿದೆ’ ಎಂದರು.

ಏತನ್ಮಧ್ಯೆ ಗ್ರಾಮೀಣ ಜನರ ಬಳಿಗೆ ತೆರಳಿ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸಲು ಖಾಸಗಿ ಸಹಭಾಗಿತ್ವ ಹೊಂದಿರುವ Volvo ಮತ್ತು Narayana Health ಸಂಸ್ಥೆಗಳು, ಗ್ರಾಮೀಣ ಭಾಗಗಳಲ್ಲಿ ಉಚಿತ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ರೂ 2 ಕೋಟಿ ಸಿಎಸ್‌ಆರ್ ನಿಧಿಯನ್ನು ಮೀಸಲಿರಿಸಿದೆ.

SCROLL FOR NEXT