ರಾಜ್ಯ

ಹೊಸ ವರ್ಷಾಚರಣೆ: ಬಂಡೀಪುರ, ಬಿಆರ್‌ಟಿ ವಸತಿಗೃಹಗಳು ಬಂದ್‌

Manjula VN

ಚಾಮರಾಜನಗರ/ಗುಂಡ್ಲುಪೇಟೆ: ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಪ್ರವಾಸಿಗರಿಗೆ ತನ್ನ ವಸತಿಗೃಹಗಳನ್ನು ನೀಡದಿರಲು ಅರಣ್ಯ ಇಲಾಖೆ ನಿರ್ಧರಿಸಿದೆ. ಹಾಗಾಗಿ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಡಿಸೆಂಬರ್‌ 31 ಮತ್ತು ಜನವರಿ 1ರಂದು ಇಲಾಖೆಗೆ ಸೇರಿದ ವಸತಿಗೃಹಗಳು, ಕಾಟೇಜ್‌ಗಳು ಪ್ರವಾಸಿಗರಿಗೆ ಲಭ್ಯವಿರುವುದಿಲ್ಲ.

ಹೊಸ ವರ್ಷದ ದಿನ ಸಾಮಾನ್ಯವಾಗಿ ಮೋಜು ಮಸ್ತಿ ಹೆಚ್ಚಾಗಿರುತ್ತದೆ. ಇದರಿಂದ ಪ್ರಾಣಿಗಳ ಸಹಜ ಜೀವನಕ್ಕೆ ಧಕ್ಕೆಯಾಗಬಹುದು ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ.

ಪ್ರವಾಸಿಗರು ಕಾಡಿನಲ್ಲಿ ಸಫಾರಿ ಸವಾರಿಯನ್ನು ಆನಂದಿಸಲು ಅಥವಾ ಹುಲಿ ಸಂರಕ್ಷಿತ ಪ್ರದೇಶದ ಸುತ್ತ ಜಂಗಲ್ ರೆಸಾರ್ಟ್‌ಗಳು, ಖಾಸಗಿ ರೆಸಾರ್ಟ್‌ಗಳು, ಹೋಂಸ್ಟೇಗಳು ಅಥವಾ ಹೋಟೆಲ್‌ಗಳನ್ನು ಕಾಯ್ದಿರಿಸುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲ ಎಂದು ಬಿಟಿಆರ್ ನಿರ್ದೇಶಕ ಪಿ ರಮೇಶ್ ಕುಮಾರ್ ಹೇಳಿದ್ದಾರೆ.

ಇದೇ ವೇಳೆ ಕಳೆದ ಮೂರು ದಿನಗಳಿಂದ ನಿರಂತರ ರಜೆ ಇರುವುದರಿಂದ ನೂರಾರು ಪ್ರವಾಸಿಗರು ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆಂದು ತಿಳಿದುಬಂದಿದೆ.

ಅಧಿಕಾರಿಗಳು ನೀಡಿರುವ ಮಾಹಿತಿಗಳ ಪ್ರಕಾರ, ಮೂರು ದಿನಗಳಲ್ಲಿ 2,847 ಪ್ರವಾಸಿಗರು ಸಫಾರಿಯನ್ನು ಆನಂದಿಸಿದ್ದು, ಇದರಿಂದ 22 ಲಕ್ಷ ರೂಪಾಯಿ ಆದಾಯ ಬಂದಿದೆ ಎಂದು ತಿಳಿಸಿದ್ದಾರೆ.

SCROLL FOR NEXT