ರಾಜ್ಯ

NEP 2020: 4 ವರ್ಷಗಳ ಪದವಿಗೆ ಇಲ್ಲ ಒಲವು, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಮೂಲಸೌಕರ್ಯಕ್ಕೆ ಒತ್ತಾಯ!

Sumana Upadhyaya

ಬೆಂಗಳೂರು: ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಅಡಿಯಲ್ಲಿ ಜಾರಿಗೊಳಿಸಲಾದ ನಾಲ್ಕು ವರ್ಷಗಳ ಪದವಿ ಕೋರ್ಸ್ ನ್ನು ಸರ್ಕಾರವು ಮುಂದುವರಿಸಲು ಶೇಕಡಾ 83ರಷ್ಟು ಮಂದಿ ಒಲವು ಹೊಂದಿಲ್ಲ ಎಂದು ರಾಜ್ಯದಲ್ಲಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯು ತೋರಿಸಿದೆ. 

NEP ನಿಯಮವು ವಿದ್ಯಾರ್ಥಿಗಳಿಗೆ ತಮ್ಮ ಉನ್ನತ ಶಿಕ್ಷಣವನ್ನು ಮುಗಿಸಲು ಬಹು ಪ್ರವೇಶ ಮತ್ತು ನಿರ್ಗಮನ ಅವಕಾಶಗಳನ್ನು ನೀಡಿದ್ದು, ಶೇಕಡಾ 97ರಷ್ಟು ವಿದ್ಯಾರ್ಥಿಗಳು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರ ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಬೇಕೆಂದು ಬಯಸುತ್ತಾರೆ ಎಂದು ಸಮೀಕ್ಷೆ ತೋರಿಸಿದೆ.

ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (AIDSO) ಎರಡು ತಿಂಗಳ ಕಾಲ ಸಮೀಕ್ಷೆ ನಡೆಸಿ ಸಂಶೋಧನೆಗಳನ್ನು 15 ಸದಸ್ಯರ ರಾಜ್ಯ ಶಿಕ್ಷಣ ನೀತಿ (SEP) ಆಯೋಗಕ್ಕೆ ಪರಿಗಣನೆಗೆ ನೀಡಲಾಯಿತು. ಒಂಬತ್ತು ಸರ್ಕಾರಿ ವಿಶ್ವವಿದ್ಯಾಲಯಗಳು, 82 ಸರ್ಕಾರಿ ಪದವಿ ಕಾಲೇಜುಗಳು, 12 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತು 15 ಸರ್ಕಾರಿ ವಿದ್ಯಾರ್ಥಿ ಹಾಸ್ಟೆಲ್‌ಗಳ ಒಟ್ಟು 23,120 ವಿದ್ಯಾರ್ಥಿಗಳು ಅಧ್ಯಯನದಲ್ಲಿ ಭಾಗವಹಿಸಿದ್ದರು.

ಪ್ರತಿ ಪಾಲುದಾರರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅಭಿಪ್ರಾಯ ಕೇಳಲಾಗಿತ್ತು. 9-ಅಂಶಗಳ ಪ್ರಶ್ನಾವಳಿಯ ಮೂಲಕ ಲಿಖಿತ ರೂಪದಲ್ಲಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಒಟ್ಟು ಸಂಗ್ರಹಿಸಿದ ಪ್ರತಿಕ್ರಿಯೆಗಳಲ್ಲಿ ಶೇಕಡಾ 20ರಷ್ಟು ಮಾದರಿಗಳಾಗಿ ಪರಿಗಣಿಸಲಾಗಿದೆ. ಕಡಿಮೆ ದಾಖಲಾತಿ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಕ್ಲಸ್ಟರಿಂಗ್ ಮಾಡುವ ಕಲ್ಪನೆಯನ್ನು 4,551 ಕ್ಕೂ ಹೆಚ್ಚು ಮಂದಿ ಸಮೀಕ್ಷೆಯಲ್ಲಿ ಭಾಗವಹಿಸಿದವರು ವಿರೋಧಿಸಿದ್ದಾರೆ ಮತ್ತು ಅಧಿಕಾರಿಗಳು ಉತ್ತಮ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಸ್ಥಾಪಿಸಬೇಕು ಒತ್ತಾಯಿಸಿದ್ದಾರೆ. 

ಸುಮಾರು ಶೇಕಡಾ 98.52 ಜನರು ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳ ನಿರ್ವಹಣೆಯ ಸಂಪೂರ್ಣ ಹಣಕಾಸಿನ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕು ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಗಳು ಅಥವಾ ವಿದ್ಯಾರ್ಥಿಗಳಿಂದ ದೇಣಿಗೆಯನ್ನು ಅವಲಂಬಿಸಬಾರದು ಎಂದು ಹೇಳಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ 20,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಸಂಸ್ಥೆಗಳನ್ನು ಆರ್ಥಿಕವಾಗಿ ಸ್ವಾಯತ್ತಗೊಳಿಸುವುದು ಮತ್ತು ಶುಲ್ಕವನ್ನು ಹೆಚ್ಚಿಸುವುದು ಪ್ರಜಾಸತ್ತಾತ್ಮಕ ಶಿಕ್ಷಣಕ್ಕೆ ಹಾನಿಕಾರಕ ಎಂದು ಒಪ್ಪಿಕೊಂಡಿದ್ದಾರೆ. ರಾಜ್ಯದಲ್ಲಿ ಎನ್‌ಇಪಿ-2020 ನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸಿರುವುದು ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ ಎಂದು ಸಮೀಕ್ಷೆಯ ವರದಿ ಹೇಳಿದೆ.

ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರನ್ನು ಒಳಗೊಂಡ ಸಮೀಕ್ಷೆಯು ಎಫ್‌ಡಿಐ ಮತ್ತು ವಿದೇಶಿ ವಿಶ್ವವಿದ್ಯಾನಿಲಯಗಳು ಶಿಕ್ಷಣ ಕ್ಷೇತ್ರವನ್ನು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

SCROLL FOR NEXT