ರಾಜ್ಯ

ಬೆಂಗಳೂರು: ಅರಮನೆ ಮೈದಾನದಲ್ಲಿ ಅಗ್ನಿ ಅವಘಡ; 3 ಕಾರು ಬೆಂಕಿಗಾಹುತಿ

Srinivasamurthy VN

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, 3 ಕಾರುಗಳು ಬೆಂಕಿಗಾಹುತಿಯಾದ ಘಟನೆ ಭಾನುವಾರ ನಡೆದಿದೆ.

ಭಾನುವಾರ ಮಧ್ಯಾಹ್ನ ಅರಮನೆ ಮೈದಾನದ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಮೂರು ಕಾರುಗಳು ಸುಟ್ಟು ಭಸ್ಮವಾಗಿದ್ದು ಇನ್ನೊಂದು ಕಾರು ಭಾಗಶಃ ಹಾನಿಯಾಗಿದೆ.

ಅರಮನೆ ಮೈದಾನದಲ್ಲಿರುವ ಕಿಂಗ್ಸ್ ಕೋರ್ಟ್‌ಗೆ ಹೊಂದಿಕೊಂಡಿರುವ ಪಾರ್ಕಿಂಗ್ ಸ್ಥಳದಲ್ಲಿ ಮಧ್ಯಾಹ್ನ 2.15 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. 

"ಪಾರ್ಕಿಂಗ್ ಸ್ಥಳದಲ್ಲಿ ತ್ಯಾಜ್ಯ ವಸ್ತುಗಳು ಮತ್ತು ಒಣ ಎಲೆಗಳು ಇದ್ದ ಜಾಗದಲ್ಲಿ ಬೆಂಕಿ ಹೊತ್ತಿದ್ದು, ಬಳಿಕ ಬೆಂಕಿ ಮೂರು ಕಾರುಗಳಿಗೆ ವ್ಯಾಪಿಸಿದೆ. ಮಹೀಂದ್ರಾ ಎಕ್ಸ್‌ಯುವಿ ಮತ್ತು ಮಾರುತಿ ಎರ್ಟಿಗಾ ಕಾರುಗಳು ಸಂಪೂರ್ಣವಾಗಿ ಸುಟ್ಟುಹೋಗಿದೆ ಮತ್ತು ಹ್ಯುಂಡೈ ಕ್ರೆಟಾ ಸುಮಾರು 25% ನಷ್ಟು ಹಾನಿಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಗರೇಟ್ ತುಂಡಿನಿಂದ ಬೆಂಕಿ
ಇನ್ನು ಇಲ್ಲಿ ಯಾರೋ ಸೇದಿ ಬಿಸಾಡಿ ಹೋದ ಸಿಗರೇಟ್ ತುಂಡಿನಿಂದ ಒಣ ತ್ಯಾಜ್ಯಕ್ಕೆ ಬೆಂಕಿ ಹೊತ್ತಿದ್ದು, ಅದು ಕಾರುಗಳಿಗೆ ವ್ಯಾಪಿಸಿರಬಹುದು ಎಂದು ಶಂಕಿಸಲಾಗಿದೆ. ಆದರೂ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸದಾಶಿವನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

SCROLL FOR NEXT