ರಾಜ್ಯ

ಬೆಂಗಳೂರಿನಲ್ಲಿ ಪ್ರತ್ಯೇಕ ಘಟನೆಯಲ್ಲಿ ಇಬ್ಬರ ಹತ್ಯೆ; ಕ್ಷುಲ್ಲಕ ಕಾರಣಕ್ಕೆ ಹತ್ಯೆ ಮಾಡಿದ ಆರೋಪಿಗಳು

Ramyashree GN

ಬೆಂಗಳೂರು: ಕೆ.ಎಸ್.ಲೇಔಟ್ ಮತ್ತು ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಕೊಲೆಗಳು ನಡೆದಿದ್ದು, ಇಬ್ಬರು ವ್ಯಕ್ತಿಗಳನ್ನು ಅವರಿಗೆ ತಿಳಿದವರೇ ಕೊಲೆ ಮಾಡಿದ್ದಾರೆ. ವರ್ತೂರಿನ ಬಾರ್‌ನಲ್ಲಿ ಅಕ್ಕಪಕ್ಕದ ಮನೆಯವರ ನಡುವೆ ನಡೆದ ಜಗಳದಲ್ಲಿ ಓರ್ವನ ಕೊಲೆಯಾಗಿದೆ.

ಮೃತನನ್ನು ದೊಮ್ಮಸಂದ್ರ ನಿವಾಸಿ ಮುನಿಯಪ್ಪ (45) ಎಂದು ಗುರುತಿಸಲಾಗಿದ್ದು, ಇವರು ವೃತ್ತಿಯಲ್ಲಿ ಟೆಂಪೋ ಚಾಲಕರಾಗಿದ್ದಾರೆ. ಆರೋಪಿಯನ್ನು ತರಕಾರಿ ಮಾರಾಟಗಾರ ಶ್ರೀಧರ್ (24) ಎಂದು ಗುರುತಿಸಲಾಗಿದೆ. ವರ್ತೂರಿನ ಹಲಸಹಳ್ಳಿ ಮುಖ್ಯರಸ್ತೆಯಲ್ಲಿರುವ ಎಸ್‌ಎಸ್‌ಎಸ್ ಬಾರ್‌ನಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ಸಂತ್ರಸ್ತ ಮತ್ತು ಆರೋಪಿ ಇಬ್ಬರೂ ಒಂದೇ ಪ್ರದೇಶದ ನಿವಾಸಿಗಳು.

ಮುನಿಯಪ್ಪ ಮತ್ತು ಶ್ರೀಧರ್ ಅವರ ತಂದೆ ಸ್ನೇಹಿತರು. ಸಂತ್ರಸ್ತನು ಶ್ರೀಧರ್‌ನ ಕುಡಿತದ ಚಟದ ಬಗ್ಗೆ ಆತನ ತಂದೆಗೆ ದೂರು ನೀಡಿದ್ದರು ಎನ್ನಲಾಗಿದೆ. ಈ ವಿಷಯ ತಂದೆಯಿಂದ ತಿಳಿದ ಶ್ರೀಧರ್, ಮುನಿಯಪ್ಪನ ಜೊತೆ ಜಗಳ ಆರಂಭಿಸಿದ್ದಾನೆ. ಒಂದೇ ಬಾರ್‌ಗೆ ಹೋಗಿದ್ದ ಇಬ್ಬರೂ ಕುಡಿದ ಅಮಲಿನಲ್ಲಿ ಜಗಳವಾಡಿದ್ದಾರೆ. ತೀವ್ರ ವಾಗ್ವಾದದ ಸಂದರ್ಭದಲ್ಲಿ, ಆರೋಪಿ ಸಂತ್ರಸ್ತನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಶ್ರೀಧರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ವರ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೆಎಸ್ ಲೇಔಟ್‌ನಲ್ಲಿ ವರದಿಯಾಗಿರುವ ಕೊಲೆಯಲ್ಲಿ 25 ವರ್ಷದ ಶರತ್‌ಕುಮಾರ್ ಎಂಬಾತನನ್ನು ಆತನ ಸ್ನೇಹಿತ ಲೋಕೇಶ್ ಎಂಬಾತ ಶುಕ್ರವಾರ ರಾತ್ರಿ ಕೋಣನಕುಂಟೆ ಬಳಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಒಂದು ಕಾಲದಲ್ಲಿ ತುಂಬಾ ಆತ್ಮೀಯರಾಗಿದ್ದ ಇಬ್ಬರೂ ನಂತರ ಕೆಲವು ಹಣಕಾಸಿನ ವಿವಾದಗಳಿಂದ ದೂರವಾಗಿದ್ದರು.

ಮದ್ಯದ ಅಮಲಿನಲ್ಲಿದ್ದ ಇಬ್ಬರೂ ಶುಕ್ರವಾರ ರಾತ್ರಿ ಮುಖಾಮುಖಿಯಾಗಿದ್ದು, ಮತ್ತೆ ಜಗಳ ಆರಂಭಿಸಿದ್ದಾರೆ. ಆರಂಭದಲ್ಲಿ ಶರತ್ ಕುಮಾರ್ ಲೋಕೇಶ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದನು. ಶರತ್ ಕುಮಾರ್‌ನಿಂದ ಚಾಕುವನ್ನು ಕಸಿದುಕೊಂಡ ಲೋಕೇಶ್ ಆತನಿಗೆ ಇರಿದಿದ್ದಾನೆ. ಚೂರಿ ಇರಿತಕ್ಕೆ ಒಳಗಾಗಿರುವ ಲೋಕೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆಎಸ್ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

SCROLL FOR NEXT