ರಾಜ್ಯ

ದಾವಣಗೆರೆಯಲ್ಲಿ ಹಿಟ್ ಅಂಡ್ ರನ್ ಪ್ರಕರಣ: ಮೂವರು ಯುವಕರ ಸಾವಿನ ಸುತ್ತ ಅನುಮಾನದ ಹುತ್ತ

Ramyashree GN

ದಾವಣಗೆರೆ: ಶನಿವಾರ ರಾತ್ರಿ ನಡೆದ 'ಹಿಟ್ ಅಂಡ್ ರನ್' ಪ್ರಕರಣದಲ್ಲಿ ಆನಗೋಡು ಸಮೀಪ ದಾವಣಗೆರೆಯ ಮೂವರು ಸಾವೀಗಾಡಿಗಿದ್ದು, ಇದೀಗ ಪ್ರಕರಣದಲ್ಲಿ ಹಲವು ಅನುಮಾನಗಳು ಮೂಡಿವೆ. ಪೊಲೀಸರು ಸ್ಥಳದಿಂದ ಕಬ್ಬಿಣದ ರಾಡ್ ವಶಪಡಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಅಪಘಾತ ನಡೆದ ಸ್ಥಳದ ಸಮೀಪದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನೂ ಅವರು ಪಡೆದುಕೊಂಡಿದ್ದಾರೆ.

ಅಪಘಾತ ನಡೆದಾಗ ಸ್ಥಳದಲ್ಲಿ ಆರು ಮಂದಿಯಿದ್ದು, ಯಾವುದೋ ವಿಚಾರಕ್ಕೆ ಜಗಳ ನಡೆದಿದೆ ಎನ್ನಲಾಗಿದೆ. ದಾವಣಗೆರೆ ನಗರದ ರಾಮನಗರ ಎಕ್ಸ್‌ಟೆನ್ಶನ್‌ನ ಪರಶುರಾಮ್ (24), ಸಂದೇಶ್ (23) ಮತ್ತು ಶಿವಕುಮಾರ್ (26) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಯುತ್ತಿದೆ. ಇನ್ನು ಇಬ್ಬರಿಗಾಗಿ ದಾವಣಗೆರೆ ಗ್ರಾಮಾಂತರ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಇದೇ ವೇಳೆ ಭಾನುವಾರ ಮಧ್ಯಾಹ್ನ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಪರಶುರಾಮ್, ಸಂದೇಶ್ ಮತ್ತು ಶಿವಕುಮಾರ್ ಶನಿವಾರ ಸಂಜೆ ದಾವಣಗೆರೆ ತಾಲೂಕಿನ ಕಾಟಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿ ದೇವಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಜಾತ್ರೆ ಮುಗಿಸಿ ರಾತ್ರಿ ಊಟ ಮಾಡಿ ಮನೆಗೆ ಮರಳುತ್ತಿದ್ದ ವೇಳೆ ಘಟನೆ ನಡೆದಿದೆ.

ಶನಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ತಮ್ಮ ಸಹೋದರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಕರೆ ಬಂದಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ್ದಾಗಿ ಶಿವಕುಮಾರ್ ಸಹೋದರಿ ಹೇಳಿದ್ದಾರೆ.

SCROLL FOR NEXT