ಯಾದಗಿರಿ: ಯಾದಗಿರಿ ತಾಲೂಕಿನ ಸೈದಾಪುರ ಬಳಿ ಶುಕ್ರವಾರ ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇಂದು ಸಂಜೆ ಸೈದಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಈ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ತೆಲಂಗಾಣದ ಗದ್ವಾಲ್ ಮೂಲದ ಸೈಫುಲ್ಲಾ (40) ಹಾಗೂ ಜ್ಞಾನೇಶ್ವರ(35) ಮೃತ ದುರ್ದೈವಿಗಳು.
ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಸೈಫುಲ್ಲಾ ಹಾಗೂ ಜ್ಞಾನೇಶ್ವರ ಇಬ್ಬರೂ ಗದ್ವಾಲ್ನಿಂದ ಕಲಬುರಗಿಗೆ ಸೀರೆ ವ್ಯಾಪಾರಕ್ಕೆ ಹೊರಟಿದ್ದರು. ಇನ್ನು ಲಾರಿ ಕಲಬುರಗಿಯಿಂದ ತಮಿಳುನಾಡಿಗೆ ಹೋಗುತ್ತಿತ್ತು ಎನ್ನಲಾಗಿದೆ.
ಸ್ಥಳಕ್ಕೆ ಸೈದಾಪುರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.