ರಾಜ್ಯ

ಬೆಂಗಳೂರು: ನಕಲಿ ಚಿನ್ನವಿಟ್ಟು ರೂ.58 ಲಕ್ಷದ ಆಭರಣ ಎಗರಿಸಿದ ಉದ್ಯೋಗಿ ಬಂಧನ

Manjula VN

ಬೆಂಗಳೂರು: ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿ ನಕಲಿ ಆಭರಣ ಇಟ್ಟು ಅಸಲಿ ಚಿನ್ನಾಭರಣ ಕಳವು ಮಾಡಿದ್ದ ಮಹಿಳಾ ಉದ್ಯೋಗಿಯನ್ನು ಯಲಹಂಕ ಠಾಣೆ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತ ಉದ್ಯೋಗಿಯನ್ನು ವಾಣಿ ವಾಡೇಕರ್ (22) ಎಂದು ಗುರ್ತಿಸಲಾಗಿದೆ. ಮಹಿಳೆಯನ್ನು ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಂಧಿತ ವಾಣಿ ವಾಡೇಕರ್ 10 ದಿನಗಳ ಅಂತರದಲ್ಲಿ ಒಂದರ ಹಿಂದೆ ಒಂದರಂತೆ ಆಭರಣಗಳನ್ನು ಕಳವು ಮಾಡಿದ್ದು, ಅಂಗಡಿಯ ಮುಖ್ಯಸ್ಥರು ವಾರಕ್ಕೊಮ್ಮೆ ಲೆಕ್ಕ ಪರಿಶೋಧನೆ ಮಾಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಬಂಧಿತ ಮಹಿಳೆ ಕೆಲಸ ಮಾಡುವಾಗ ಕದಿಯಲು ಬಯಸಿದ ಆಭರಣಗಳ ಚಿತ್ರಗಳನ್ನು ತೆಗೆದಿಟ್ಟುಕೊಳ್ಳುತ್ತಿದ್ದಳು. ಬಳಿಕ ಫ್ಯಾನ್ಸಿ ಸ್ಟೋರ್‌ಗಳಲ್ಲಿ ಅದರ ನಕಲುಗಳನ್ನು ಹುಡುಕುತ್ತಿದ್ದಳು. ಕದ್ದ ನಂತರ ಅಸಲಿ ಆಭರಣದ ಸ್ಥಳದಲ್ಲಿ ನಕಲಿ ಚಿನ್ನವಿರಿಸುತ್ತಿದ್ದಳು. ಮನೆಯಲ್ಲಿ ಹಣಕಾಸಿನ ಸಮಸ್ಯೆಯಿಂದ ಆಭರಣಗಳನ್ನು ಕದ್ದಿರುವುದಾಗಿ ವಿಚಾರಣೆ ವೇಳೆ ವಾಣಿ ಹೇಳಿಕೊಂಡಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT