ಮೈಸೂರು: ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದ (ಬಿಆರ್ಟಿ) ಹುಲಿ ಸಂರಕ್ಷಿತಾರಣ್ಯದಲ್ಲಿ ನಿಯೋಜನೆಗೊಂಡಿದ್ದ ಅರಣ್ಯ ಇಲಾಖೆಯ ಸ್ನಿಫರ್ ಡಾಗ್ ಝಾನ್ಸಿ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಡಿಸೆಂಬರ್ 30ರಂದು ಪುಣಜನೂರು ಕಚೇರಿ ಎದುರು ಇರುವ ರಸ್ತೆಯಲ್ಲಿ ಬೀದಿನಾಯಿ ಅಟ್ಟಿಸಿಕೊಂಡು ಹೋದ ಝಾನ್ಸಿಗೆ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
20 ಬೀದಿನಾಯಿಗಳು ಝಾನ್ಸಿ ಮೇಲೆ ದಾಳಿ ನಡೆಸಲು ಯತ್ನ ನಡೆಸಿದವು. ಈ ವೇಳೆ ಗಾಬರಿಗೊಂಡ ಝಾನ್ಸಿ ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಓಡಲು ಆರಂಭಿಸಿದರು. ಬೀದಿ ನಾಯಿಗಳ ಓಡಿಸಲು ನಿರ್ವಾಹಕರು ಪ್ರಯತ್ನಿಸಿದರೂ, ನಾಯಿಗಳು ಬೊಗಳುವುದನ್ನು ನಿಲ್ಲಿಸಲಿಲ್ಲ. ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಝಾನ್ಸಿಗೆ ಮುಖ್ಯರಸ್ತೆಯಲ್ಲಿ ಲಾರಿ ಚಕ್ರಕ್ಕೆ ಸಿಲುಕಿದ್ದಳು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ..
ಸರ್ಕಾರೇತರ ಸಂಸ್ಥೆಯಾದ ಟ್ರಾಫಿಕ್ ಮತ್ತು ವಿಶ್ವ ವನ್ಯಜೀವಿ ನಿಧಿ(ವರ್ಲ್ಡ್ ವೈಲ್ಡ್ಲೈಫ್ ಫಂಡ್) ಇಂಡಿಯಾ ವತಿಯಿಂದ ಚಂಡೀಗಢ ಇಂಡೋ - ಟಿಬೇಟಿನ್ ಬಾರ್ಡರ್ ಪೊಲೀಸ್ ಪೋರ್ಸ್ (ಐಟಿಬಿಪಿ) ನಲ್ಲಿ ಝಾನ್ಸಿ ಸುಮಾರು ಆರೇಳು ತಿಂಗಳು ಕಠಿಣ ತರಬೇತಿ ಪಡೆದು ಬಂದಿದ್ದಳು. ಝಾನ್ಸಿ ನೋಡಿಕೊಳ್ಳಲು ಅರಣ್ಯ ಇಲಾಖೆ ಗಾರ್ಡ್ ಬಸವರಾಜುಗೆ ಹ್ಯಾಂಡ್ಲರ್ ತರಬೇತಿಯನ್ನೂ ನೀಡಲಾಗಿತ್ತು.