ರಾಜ್ಯ

ಭಾರತದತ್ತ ನೋಡುತ್ತಿವೆ ಜಾಗತಿಕ ಉದ್ಯಮ, ರನ್‌ವೇ ರೆಡಿ ನೀವು ಟೇಕಾಫ್‌ ಆಗುವುದೊಂದೇ ಬಾಕಿ: ಯುವಕರಿಗೆ ಪ್ರಧಾನಿ

Srinivas Rao BV

ಹುಬ್ಬಳ್ಳಿ: "ಹಲವು ಜಾಗತಿಕ ಉದ್ಯಮಗಳು ಭಾರತದತ್ತ ನೋಡುತ್ತಿವೆ, ಕಳೆದ 8 ವರ್ಷಗಳಲ್ಲಿ ಯುವಕರಿಗಾಗಿ ಸಾಕಷ್ಟು ಯೋಜನೆ ಜಾರಿ ಮಾಡಿದ್ದೇವೆ. ಸಾಧನೆ ಮಾಡಲು ಯುವ ಸಮುದಾಯಕ್ಕೆ ಇದು ಸಕಾಲ. ರನ್‌ವೇ ರೆಡಿ ಇದೆ, ನೀವು ಟೇಕಾಫ್‌ ಆಗುವುದೊಂದೇ ಬಾಕಿ" ಎಂದು ಪ್ರಧಾನಿ ನರೇಂದ್ರ ಮೋದಿ ಯುವಜನತೆಗೆ ಕರೆ ನೀಡಿದ್ದಾರೆ. 

ಹುಬ್ಬಳ್ಳಿಯ ರೈಲ್ವೆ ರೈಲ್ವೆ ಮೈದಾನದಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,  ಭಾರತ ಒಂದು ಯುವ ದೇಶ. ಯುವಕರ ದೊಡ್ಡ ಪಡೆ, ಯುವ ಶಕ್ತಿ ನಮ್ಮ ದೇಶದಲ್ಲಿದೆ. ದೇಶದ ಬೆಳವಣಿಗೆಗೆ ಯುವ ಶಕ್ತಿ ಅಡಿಪಾಯವಾಗಲಿದೆ ಎಂದು ಹೇಳಿದರು.

ಯುವಕರಿಗಾಗಿ ಭವ್ಯ ಭವಿಷ್ಯವನ್ನು ನಾವು ರೂಪಿಸಿದ್ದೇವೆ. ಯುವ ಶಕ್ತಿಯಿಂದಾಗಿ ಎಲ್ಲಾ ಕ್ಷೇತ್ರಗಳಲ್ಲಿ ಭಾರತ ಯಶಸ್ವಿಯಾಗಿ ಸಾಗುತ್ತಿದೆ. ಭಾರತ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಭಾರತದ ಸ್ಟಾರ್ಟ್‌ಅಪ್‌ಗಳಿಗೆ ಹಣ ಹರಿದು ಬರುತ್ತಿದೆ. ವಿದೇಶಿ ಬಂಡವಾಳ ಹೂಡಿಕೆಯಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಯುವಕರಿಗೆ ಸ್ವಾಮಿ ವಿವೇಕಾನಂದರವರು ಪ್ರೇರಣೆ ಆಗಿದ್ದಾರೆ. ಮೈಸೂರು ಮಹಾರಾಜರು ಚಿಕಾಗೋ ಯಾತ್ರೆಗೆ ಸಹಾಯ ಮಾಡಿದ್ದರು. ಸ್ವಾಮಿ ವಿವೇಕಾನಂದರು ಯುವಕರೇ ದೇಶದ ಭವಿಷ್ಯ ಎಂದಿದ್ದರು. ಚಿಕ್ಕ ವಯಸ್ಸಿನಲ್ಲೇ ಸ್ವಾಮಿ ವಿವೇಕಾನಂದರು ಸಾಧನೆ ಮಾಡಿದ್ದರು. ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದು. ದೇಶವನ್ನು ಮುನ್ನಡೆಸುವುದು ಯುವಕರ ಕರ್ತವ್ಯ. ದೇಶದ ಭವಿಷ್ಯ ಯುವಕರ ಮೇಲೆ ನಿಂತಿದೆ ಎಂದು ಮೋದಿ ಹೇಳಿದ್ದಾರೆ.

ಮಹಿಳಾ ಶಕ್ತಿ ರಾಷ್ಟ್ರಶಕ್ತಿಯನ್ನು ಜಾಗೃತವಾಗಿ ಇಟ್ಟಿದೆ ಎಂದೂ ಮೋದಿ ಹೇಳಿದ್ದು ಭಾರತದ ಮಹಿಳೆಯರು ಫೈಟರ್ ಜೆಟ್ ಹಾರಿಸುತ್ತಿದ್ದಾರೆ. ವಿಜ್ಞಾನ, ತಂತ್ರಜ್ಞಾನದಲ್ಲಿ ನಮ್ಮ ಹೆಣ್ಣುಮಕ್ಕಳು ಉನ್ನತ ಸಾಧನೆ ಮಾಡಿದ್ದಾರೆ. 21ನೇಯ ಶತಮಾನವನ್ನು ಭಾರತದ ಶತಮಾನ ಮಾಡಬೇಕಿದೆ ಎಂದು ಮೋದಿ ಕರೆ ನೀಡಿದ್ದಾರೆ.

SCROLL FOR NEXT