ರಾಜ್ಯ

ಗಾಳಿಪಟ ಹಾರಿಸುವಾಗ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಬಾಲಕ ಸಾವು!

Manjula VN

ಬೆಂಗಳೂರು: ​ಗಾಳಿಪಟ ಹಾರಿಸುವಾಗ ಹೈಟೆನ್ಶನ್​ ವಿದ್ಯುತ್ ತಂತಿ ತಗುಲಿ ಬಾಲಕ ಸಾವನ್ನಪ್ಪಿರುವ‌ ಘಟನೆ ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಮುಂಡಿ ನಗರದ ವಿಶ್ವೇಶ್ವರಯ್ಯ ಲೇಔಟ್​ನಲ್ಲಿ‌ ನಡೆದಿದೆ.
 
ಮೃತ ಬಾಲಕನನ್ನು ಅಬೂಬಕರ್ ಸಿದ್ದಿಕಿ ಖಾನ್ ಎಂದು ಗುರುತಿಸಲಾಗಿದೆ. ಬಾಲಕ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ಎಂದು ತಿಳಿದುಬಂದಿದೆ.

ಬಾಲಕನ ಸಾವಿಗೆ ಕಾರಣರಾದ ಬಿಬಿಎಂಪಿ, ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಬೂಬಕರ್ ಸಿದ್ದಿಕಿ ಖಾನ್ ಮತ್ತು ಆತನ ಸ್ನೇಹಿತ ಸೋಮವಾರ ಮಧ್ಯಾಹ್ನ ಆಟವಾಡಲು ಅವರ ಮನೆ ಸಮೀಪದ ವಿಶ್ವೇಶ್ವರಯ್ಯ ಪಾರ್ಕ್‌ಗೆ ತೆರಳಿದ್ದರು. ಈ ವೇಳೆ ಬಾಲಕರು ಗಾಳಿಪಟ ಹಾರಿಸುತ್ತಿದ್ದರು. ಬಾನಿನಲ್ಲಿ ಹಾರಾಡುತ್ತಿದ್ದ ಗಾಳಿಪಟ ನಂತರ ಉದ್ಯಾನವನದ ಪಕ್ಕದ ಮನೆಯ ಟೆರೇಸ್ ಬಳಿ ಹಾದು ಹೋಗಿ ಹೈಟೆನ್ಷನ್ ಕೇಬಲ್‌ಗೆ ಸಿಕ್ಕಿಹಾಕಿಕೊಂಡಿತ್ತು. ಈ ವೇಳೆ ಬಾಲಕರು ಗಾಳಿಪಟ ಬಿಡಿಸಲು ಸ್ಥಳಕ್ಕೆ ಹೋಗಿದ್ದಾರೆ. ಅಬೂಬಕರ್ ಕೋಲು ಬಳಸಿ ಗಾಳಿಪಟ ಎಳೆಯಲು ಯತ್ನಿಸಿದ್ದಾನೆ. ಈ ವೇಳೆ ವಿದ್ಯುತ್ ಶಾಕ್ ಹೊಡೆದಿದೆ. ತೀವ್ರ ಸುಟ್ಟ ಗಾಯಗಳಿಂದ ಬಾಲಕ ಕೆಳಗೆ ಕುಸಿದು ಬಿದ್ದಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಲಕನಿಗೆ ಶೇ.80 ರಷ್ಟು ಸುಟ್ಟ ಗಾಯಗಳಾಗಿದ್ದು, ಬಳಿಕ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಬೆಳಗಿನ ಜಾವ 3.30ಕ್ಕೆ ಮೃತಪಟ್ಟಿದ್ದಾನೆ ಎಂದು ಆರ್‌ಟಿ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಬಾಲಕನ ತಾಯಿ ಸುಲ್ತಾನಾ ಅವರು ನೀಡಿದ ದೂರಿನ ಮೇರೆಗೆ ಬಿಬಿಎಂಪಿ, ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ ಅಧಿಕಾರಿಗಳ ವಿರುದ್ಧ ಪೊಲೀಸರು ಸೆಕ್ಷನ್‌ 304ಎ (ನಿರ್ಲಕ್ಷ್ಯದಿಂದ ಸಾವು) ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ನಡುವೆ ಬೆಸ್ಕಾಂ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಕೆಪಿಟಿಸಿಎಲ್ ಅಳವಡಿಸಿರುವ 66ಕೆವಿ ಹೈಟೆನ್ಷನ್ ಲೈನ್ ಇದಾಗಿದ್ದು, ಇದರಲ್ಲಿ ನಮ್ಮ ಪಾತ್ರವಿಲ್ಲ ಎಂದು ತಿಳಿಸಿದ್ದಾರೆ.

SCROLL FOR NEXT