ರಾಜ್ಯ

ಬೆಂಗಳೂರು ಉಪನಗರ ರೈಲು ಯೋಜನೆ: ಮರಗಳ ಸ್ಥಳಾಂತರ ಕಾರ್ಯಕ್ಕೆ ಚಾಲನೆ

Nagaraja AB

ಬೆಂಗಳೂರು: ರೂ. 15, 767 ಕೋಟಿ ವೆಚ್ಚದ ಬೆಂಗಳೂರು ಉಪನಗರ ರೈಲು ಯೋಜನೆಗಾಗಿ ಮರಗಳ ಸ್ಥಳಾಂತರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.  

ಹೆಬ್ಬಾಳದಲ್ಲಿರುವ ಎರಡು ಮಹಾಗನಿ ಮರಗಳನ್ನು  ಯಶವಂತಪುರದ ಕೇಂದ್ರೀಯ ವಿದ್ಯಾಲಯ ಶಾಲೆಯ ಬಳಿಗೆ ಬುಧವಾರ ಸ್ಥಳಾಂತರಿಸಲಾಯಿತು.  ಮತ್ತೆರಡು ಮಹಾಗನಿ ಮರಗಳನ್ನು ಗುರುವಾರ ರಾತ್ರಿ ಸ್ಥಳಾಂತರಿಸಲಾಗುತ್ತಿದೆ ಎಂದು ರಾಜ್ಯ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಎಂಟರ್ ಪ್ರೈಸಸ್ (ಕೆ-ರೈಡ್ ) ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿವೆ.

ಒಟ್ಟು 58 ಮರಗಳ ಸ್ಥಳಾಂತರಕ್ಕೆ ಯೋಜಿಸಿದ್ದು, ಇದಕ್ಕೆ ಬಿಬಿಎಂಪಿ ಅರಣ್ಯ ಅಧಿಕಾರಿಗಳು ಲಿಖಿತ ಒಪ್ಪಿಗೆ ನೀಡಿರುವುದಾಗಿ ಅಧಿಕಾರಿಯೊಬ್ಬರು ಹೇಳಿದ್ದಾರೆ.ಇದಲ್ಲದೆ, ಹೈಕೋರ್ಟ್ ನೇಮಿಸಿದ ಅರಣ್ಯ ಸಮಿತಿ  ಕೆ-ರೈಡ್ 268 ಮರಗಳನ್ನು ಕಡಿಯಲು ಹಸಿರು ನಿಶಾನೆ ತೋರಿಸಿದೆ ಎಂದು ಅವರು ತಿಳಿಸಿದ್ದಾರೆ.

ಕೆ-ರೈಡ್ ಮೊದಲ ಹಂತದಲ್ಲಿ 661 ಮರಗಳನ್ನು ಕಡಿಯಲು ಅನುಮತಿ ಕೋರಿತ್ತು. ಕಡಿಯುವ ಪ್ರತಿ ಮರಕ್ಕೆ ಪರಿಹಾರವಾಗಿ 10 ಸಸಿಗಳನ್ನು ನೆಡುತ್ತೇವೆ ಎಂದು ಅವರು ಹೇಳಿದರು.

ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರದವರೆಗೆ ಸಾಗುವ ಯೋಜನೆಯ ಎರಡನೇ ಕಾರಿಡಾರ್ ಮಾರ್ಗದುದ್ದಕ್ಕೂ ಮರಗಳು ಇವೆ. ಸಿವಿಲ್ ಮೂಲಸೌಕರ್ಯ ಕಾಮಗಾರಿಗಳ ಟೆಂಡರ್ ಅನ್ನು ಎಲ್ & ಟಿ ಲಿಮಿಟೆಡ್‌ಗೆ ನೀಡಲಾಗಿದೆ ಮತ್ತು ಈಗಷ್ಟೇ ಕೆಲಸ ಪ್ರಾರಂಭವಾಗಿದೆ.

ಇನ್ನೊಂದು ಮೂಲಗಳ ಪ್ರಕಾರ, ಕೆ-ರೈಡ್ ಎರಡನೇ ಹಂತದಲ್ಲಿ1, 430 ಮರಗಳನ್ನು ಮತ್ತು ಮೂರನೇ ಹಂತದಲ್ಲಿ ಇನ್ನೂ 764 ಮರಗಳನ್ನು ಕಡಿಯಲು ಅನುಮತಿಯನ್ನು ಕೋರಿದ್ದು, ಅನುಮತಿಗಾಗಿ ಕಾಯುತ್ತಿದೆ ಎನ್ನಲಾಗಿದೆ. 

SCROLL FOR NEXT