ರಾಜ್ಯ

ಪ್ರಶಸ್ತಿಯನ್ನು ಕರ್ನಾಟಕದ ಜನತೆಗೆ ಸಮರ್ಪಿಸುತ್ತೇನೆ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ

Manjula VN

ಬೆಂಗಳೂರು: ಆರು ದಶಕಗಳ ಕಾಲ ತಮ್ಮನ್ನು ಬೆಳೆಸಿದ ಕರ್ನಾಟಕದ ಜನತೆಗೆ ಪದ್ಮವಿಭೂಷಣ ಪ್ರಶಸ್ತಿಯನ್ನು  ಸಮರ್ಪಿಸಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು, ಪ್ರಶಸ್ತಿಗಾಗಿ ಪ್ರಧಾನಮಂತ್ರಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಪ್ರಶಸ್ತಿಯನ್ನು ನಿರೀಕ್ಷಿಸಿರಲಿಲ್ಲ. ಪ್ರಶಸ್ತಿ ನೀಡಿದ್ದಕ್ಕೆ ಸರ್ಕಾರಕ್ಕೆ ವಿನಮ್ರರಾಗಿದ್ದೇನೆ. ರಾಜ್ಯ ಜನತೆಗೆ ಕೃತಜ್ಞರಾಗಿರುತ್ತೇನೆ ಎಂದು ಹೇಳಿದ್ದಾರೆ.

ಕೃಷ್ಣ ಅವರು ಕಾಂಗ್ರೆಸ್ ಜೊತೆಗಿನ ಸುಮಾರು 50 ವರ್ಷಗಳ ಒಡನಾಟವನ್ನು ಕೊನೆಗೊಳಿಸಿ, 2017 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಬಳಿಕ ಇತ್ತೀಚೆಗಷ್ಟೇ ಸಕ್ರಿಯ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು.

1999 ರಿಂದ 2004 ರವರೆಗೆ ಕರ್ನಾಟಕದ ಸಿಎಂ ಆಗಿ, ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಸಹಾಯ ಮಾಡುವ ಹಲವಾರು ಉಪಕ್ರಮಗಳನ್ನು ಕೈಗೊಂಡ ಮತ್ತು ಬೆಂಗಳೂರನ್ನು ಜಾಗತಿಕ ಭೂಪಟದಲ್ಲಿ ಇರಿಸಿದ ಹೆಗ್ಗಳಿಕೆಗೆ ಎಸ್.ಎಂ.ಕೃಷ್ಣ ಪಾತ್ರರಾಗಿದ್ದಾರೆ.

ಎಸ್.ಎಂ.ಕೃಷ್ಣ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ದೊರೆತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು, “ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾದ ಶ್ರೀ ಎಸ್ ಎಂ ಕೃಷ್ಣ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಅವರು ಕರ್ನಾಟಕದ ಮಹಾನ್ ದೂರದೃಷ್ಟಿಯ ಮುಖ್ಯಮಂತ್ರಿಯಾಗಿದ್ದರು, ಅವರ ನಾಯಕತ್ವದಲ್ಲಿ ಬೆಂಗಳೂರು ಐಟಿ / ಬಿಟಿ / ವಿಜ್ಞಾನ ರಾಜಧಾನಿ ಮತ್ತು ವಿಶ್ವದ ಸಾಫ್ಟ್‌ವೇರ್ ರಾಜಧಾನಿಯಾಯಿತು ಎಂದು ಹೇಳಿದ್ದಾರೆ.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಅವರು ಟ್ವೀಟ್ ಮಾಡಿ, ದೂರದೃಷ್ಟಿಯುಳ್ಳ ನಾಯಕ ಬೆಂಗಳೂರನ್ನು ಭಾರತದ ಐಟಿ ಹಬ್ ಮಾಡಲು ಅಪಾರ ಕೊಡುಗೆ ನೀಡಿದ್ದಾರೆ. “ಎಸ್‌ಎಂ ಕೃಷ್ಣ ಅವರಿಗೆ ಪದ್ಮವಿಭೂಷಣ ಲಭಿಸಿರುವುದು ಕನ್ನಡಿಗರಾದ ನಮಗೆಲ್ಲರಿಗೂ ಹೆಮ್ಮೆಯ ಕ್ಷಣ ಎಂದು ತಿಳಿಸಿದ್ದಾರೆ.

ಮಾಜಿ ಸಂಸದೆ ದಿವ್ಯಾ ಸ್ಪಂದನಾ ಅವರು ಟ್ವೀಟ್ ಮಾಡಿ, ಒಬ್ಬ ರಾಜಕಾರಣಿ ಮತ್ತು ಕರ್ನಾಟಕ ಕಂಡ ಅತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಎಸ್ಎಂ.ಕೃಷ್ಣಾ ಒಬ್ಬರು. ಇದೊಂದು ಅತ್ಯಂತ ಅದ್ಭುತವಾದ ಸುದ್ದಿ. ನನ್ನ ತಂದೆ ಇಂದು ಬದುಕಿದಿದ್ದರೆ ಇದನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ನಿಮಗೆ ತುಂಬು ಹೃದಯದ ಅಭಿನಂದನೆಗಳು ಸರ್ ಎಂದು ಟ್ವೀಟ್ ಮಾಡಿದ್ದಾರೆ.

SCROLL FOR NEXT