ರಾಜ್ಯ

'ಗ್ಯಾರಂಟಿ' ಕದನ: ವಿಧಾನ ಸಭೆಯಲ್ಲಿ ಬಿಜೆಪಿ ನಾಯಕರ ಪ್ರತಿಭಟನೆ, ಗದ್ದಲ; ಕಲಾಪ ಅಪರಾಹ್ನಕ್ಕೆ ಮುಂದೂಡಿಕೆ

Sumana Upadhyaya

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮುನ್ನ ಆಡಳಿತಾರೂಢ ಕಾಂಗ್ರೆಸ್ ನೀಡಿದ್ದ ಐದು ಭರವಸೆಗಳನ್ನು ಜಾರಿಗೊಳಿಸಲು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ನಾಯಕರು ಇಂದು ಮಂಗಳವಾರ ಬೆಳಗ್ಗೆ ವಿಧಾನ ಸಭೆ ಕಲಾಪ ಸೇರಿದಾಗಲೇ ತೀವ್ರ ಪ್ರತಿಭಟನೆ ಮಾಡಿದ್ದರಿಂದ  ಸ್ಪೀಕರ್ ಅವರು ಕಲಾಪವನ್ನು ಅಪರಾಹ್ನ 3 ಗಂಟೆಗೆ ಮುಂದೂಡಿದರು. 

ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳನ್ನು ಪ್ರಸ್ತಾಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತಿಗೆ ತೃಪ್ತರಾಗದ ಬಿಜೆಪಿ ಶಾಸಕರು ಸದನದ ಬಾವಿಗೆ ನುಗ್ಗಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಸ್ಪೀಕರ್ ಅವರು ಎಷ್ಟೇ ಮನವಿ ಮಾಡಿಕೊಂಡರೂ ಕೇಳಲಿಲ್ಲ. ಇದರಿಂದ ಸ್ಪೀಕರ್ ಯು ಟಿ ಖಾದರ್ ಕಲಾಪವನ್ನು ಕೆಲ ಹೊತ್ತಿಗೆ ಮುಂದೂಡಿದರು. 

ಸ್ಪೀಕರ್ ಪ್ರಶ್ನೆ ಮಾಡಲು ಅವಕಾಶ ನೀಡುವುದರೊಂದಿಗೆ ಇಂದು ಬೆಳಗ್ಗೆ ಕಲಾಪ ಆರಂಭವಾಗಿತ್ತು. ಅದರಂತೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಪ್ರಶ್ನೆ ಎತ್ತಲು ಎದ್ದರು. ಆದರೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶ್ನೋತ್ತರ ವೇಳೆಯಲ್ಲಿ ಮುಂದೂಡಿಕೆ ನಿರ್ಣಯ ಅಂಗೀಕರಿಸಿ ಚರ್ಚೆಗೆ ಒತ್ತಾಯಿಸಿದರು.

ಅದಕ್ಕೆ ಬಿಜೆಪಿ ಶಾಸಕ ಆರ್.ಅಶೋಕ ಅವರನ್ನು ದನಿಗೂಡಿಸಿ, ಐದು ಖಾತರಿಗಳ ಹೆಸರಿನಲ್ಲಿ ಸರ್ಕಾರ ಜನರನ್ನು "ಮೋಸ" ಮಾಡುತ್ತಿದೆ ಎಂದು ಆರೋಪಿಸಿದರು. ಕೇಸರಿ ಪಕ್ಷದ ಇತರ ಶಾಸಕರು ಇದಕ್ಕೆ ದನಿಗೂಡಿಸಿದಾಗ ತೀವ್ರ ಗದ್ದಲ, ಕೋಲಾಹಲ ಉಂಟಾಯಿತು.

ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ನೀಡುವಂತೆ ಪ್ರತಿಪಕ್ಷ ಬಿಜೆಪಿಗೆ ಸ್ಪೀಕರ್ ಪದೇ ಪದೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಆಗ ಎದ್ದುನಿಂತು ಮಾತನಾಡಿದ ಡಿಸಿಎಂ ಶಿವಕುಮಾರ್, ಐದು ಭರವಸೆಗಳ ಯಶಸ್ಸನ್ನು ಸಹಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಪ್ರಶ್ನೋತ್ತರ ಅವಧಿ ನಡೆಯಲಿ. ಆಗ ನಾವು ಬಿಜೆಪಿಯವರ ಬುದ್ದಿವಂತಿಕೆ ಮಾತು ಕೇಳುತ್ತೇವೆ ಎಂದರು. 

ಆದರೆ, ಐದು ಭರವಸೆಗಳ ಜಾರಿಯಲ್ಲಿನ ವೈಫಲ್ಯದ ಬಗ್ಗೆ ಬಿಜೆಪಿ ಶಾಸಕರು ಪಟ್ಟು ಹಿಡಿದರು. ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಜಮಾ ಮಾಡುವ ಮತ್ತು ವಿದೇಶದಲ್ಲಿರುವ ಕಪ್ಪುಹಣ ವಾಪಸ್ ತರುವ ಭರವಸೆಯನ್ನು ಬಿಜೆಪಿ ಎಂದಾದರೂ ಈಡೇರಿಸಿದೆಯೇ ಎಂದು ಶಿವಕುಮಾರ್ ಪ್ರಶ್ನಿಸಿದರು. ನಮ್ಮ ಭರವಸೆಗಳಿಗೆ ನಾವು ಬದ್ಧರಾಗಿದ್ದೇವೆ. ನಾವು ಅವುಗಳನ್ನು ಈಡೇರಿಸುತ್ತೇವೆ ಎಂದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ ಬಿಜೆಪಿ ತನ್ನ ಬಿಗಿಪಟ್ಟು ಸಡಿಲಿಸುವಂತೆ ಕೇಳಿಕೊಂಡರು. ಕೂಡಲೇ ಬಿಜೆಪಿ ಶಾಸಕರು ಸದನದ ಬಾವಿಗೆ ನುಗ್ಗಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕಲಾಪಕ್ಕೆ ಅಡ್ಡಿಪಡಿಸಿದರು. ಗದ್ದಲದಿಂದಾಗಿ ಸ್ಪೀಕರ್ ಖಾದರ್ ಕಲಾಪವನ್ನು ಅಪರಾಹ್ನ 3 ಗಂಟೆಗೆ ಮುಂದೂಡಿದ್ದಾರೆ. 

SCROLL FOR NEXT